ಹೈದರಾಬಾದ್ (ಪಿಟಿಐ): ಭಾರತದ ಚಾರಿತ್ರ್ಯವನ್ನು ‘ಜ್ಯಾತ್ಯತೀತ’ ಪದ ಪ್ರತಿಬಿಂಬಿಸುತ್ತದೆ. ಸಂವಿಧಾನದ ಪೀಠಿಕೆಯಿಂದ ಈ ಪದವನ್ನೇ ಕೈಬಿಡಲು ಬಿಜೆಪಿ ಪ್ರಯತ್ನಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಕುರಿತು ಸ್ಪಷ್ಟನೆ ನೀಡಬೇಕು ಎಂದು ‘ಸಿಪಿಐ’ನ ಪ್ರಧಾನ ಕಾರ್ಯದರ್ಶಿ ಸುರವರಂ ಸುಧಾಕರ್ ರೆಡ್ಡಿ ಆಗ್ರಹಿಸಿದರು.
‘ಜ್ಯಾತ್ಯತೀತ’ ಪದವು ದೇಶದ ಚಾರಿತ್ರ್ಯವನ್ನು ಬಿಂಬಿಸಿದರೆ, ‘ಸಮಾಜವಾದಿ’ ಪದವು ದೇಶದ ಸಾಧಿಸಬೇಕಾದ ಗುರಿಯನ್ನು ಸೂಚಿಸುತ್ತದೆ. ಇವೆರಡು ಶಬ್ದಗಳನ್ನು ಸಂವಿಧಾನದ ಪೂರ್ವಪೀಠಿಕೆಯಲ್ಲಿ 1976ರಲ್ಲಿ ಸೇರಿಸಲಾಯಿತು. ಇವೆರಡು ಪದವನ್ನು ತೆಗೆದುಹಾಕಲು ಸಾಧ್ಯವಿಲ್ಲ. ಬಿಜೆಪಿ ಮತ್ತು ಎನ್ಡಿಎ ಇಂತಹ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಅವರು ಶನಿವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ದೇಶ ವಿಭಜನೆ ನಂತರ ಪಾಕಿಸ್ತಾನ ಇಸ್ಲಾಮಿಕ್ ಗಣತಂತ್ರ ವ್ಯವಸ್ಥೆ ಅಳವಡಿಸಿಕೊಂಡರೆ ಭಾರತ ಜ್ಯಾತ್ಯತೀತ ಗಣತಂತ್ರ ವ್ಯವಸ್ಥೆ ಅಳವಡಿಸಿಕೊಂಡಿತು ಎಂದು ಅವರು ವಿವರಿಸಿದರು.
ಗಣರಾಜ್ಯೋತ್ಸವದ ದಿನ ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆ ಪ್ರಕಟಿಸಿರುವ ಜಾಹೀರಾತಿನಲ್ಲಿ ಸಂವಿಧಾನದ ಪೀಠಿಕೆಯಲ್ಲಿ ‘ಜಾತ್ಯತೀತ’, ‘ಸಮಾಜವಾದಿ’ ಪದಗಳಿಲ್ಲದ ಚಿತ್ರವನ್ನು ಬಳಸಿರುವುದಕ್ಕೆ ಸರ್ಕಾರ ಟೀಕೆಗೆ ಗುರಿಯಾಗಿತ್ತು. ಇದರ ಬೆನ್ನಲ್ಲೆ, ಸಂವಿಧಾನದ ಮೂಲ ಪೂರ್ವ ಪೀಠಿಕೆಯಲ್ಲಿ ‘ಜಾತ್ಯತೀತ’, ‘ಸಮಾಜವಾದಿ’ ಪದಗಳಿಲ್ಲ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ರಾಜವರ್ಧನ್ ಸಿಂಗ್ ರಾಠೋಡ್ ಹೇಳಿಕೆ ನೀಡಿ ವಿವಾದ ಬೆಳೆಯುವಂತೆ ಮಾಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.