ನವದೆಹಲಿ: ‘ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ’ (ನರೇಗ) ಗೆ ಕೊಡುತ್ತಿರುವ ಹಣವನ್ನು ಹೆಚ್ಚಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ ಕೇಂದ್ರ ಸರ್ಕಾರವನ್ನು ಆಗ್ರಹಪಡಿಸಿದ್ದಾರೆ.
ರಾಷ್ಟ್ರದ 3ನೇ ‘ಅತ್ಯುತ್ತಮ ಪಂಚಾಯತ್ರಾಜ್ ವ್ಯವಸ್ಥೆ’ ಪ್ರಶಸ್ತಿಯನ್ನು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರಿಂದ ಸ್ವೀಕರಿಸಿದ ಬಳಿಕ ಮಾತನಾಡಿದ ಕರ್ನಾಟಕದ ಗ್ರಾಮೀಣ ಮತ್ತು ಪಂಚಾಯತ್ರಾಜ್ ಸಚಿವರು, ನರೇಗ ಅತ್ಯುತ್ತಮ ಯೋಜನೆಯಾಗಿದ್ದು, ಅದಕ್ಕೆ ಕೊಡುತ್ತಿರುವ ಹಣ ಹೆಚ್ಚಿಸಬೇಕು ಎಂದರು.
ನರೇಗ ಯೋಜನೆಯಡಿ ರಾಜ್ಯಕ್ಕೆ ನೀಡುತ್ತಿರುವ ಹಣದ ಪ್ರಮಾಣ 2014– 15ನೇ ಸಾಲಿನಲ್ಲಿ ಒಂದು ಸಾವಿರ ಕೋಟಿ ರೂಪಾಯಿ ಕಡಿಮೆ ಆಗಿದೆ. ಕೇಂದ್ರ ಸರ್ಕಾರ ಕೊಡಬೇಕಿದ್ದ 3150ಕೋಟಿಗೆ ಬದಲಿಗೆ 1092ಕೋಟಿ ನೀಡಿದೆ ಎಂದೂ ಪಾಟೀಲ ವಿವರಿಸಿದರು. ಕೇಂದ್ರ ಸರ್ಕಾರದಿಂದ ಉದ್ಯೋಗ ಖಾತರಿ ಯೋಜನೆಯಡಿ 760 ಕೋಟಿ ಬಾಕಿ ಬರಬೇಕಿದೆ. ಏಪ್ರಿಲ್ 20ರ ಬಳಿಕ ಒಂದು ರೂಪಾಯಿಯೂ ಬಂದಿಲ್ಲ. ಏಪ್ರಿಲ್ ಮೊದಲ ವಾರದಲ್ಲಿ ಹಣ ಬಿಡುಗಡೆ ಆಗಬೇಕಿತ್ತು. ರಾಜ್ಯ ಸರ್ಕಾರ ಯೋಜನೆಯ ಶೇ. 80ರಷ್ಟು ಹಣ ಬಳಕೆ ಮಾಡಿರುವುದಕ್ಕೆ ಪ್ರಮಾಣ ಪತ್ರ ನೀಡಿದೆ ಎಂದರು.
ಯೋಜನೆಯಡಿ ಹಳ್ಳಿಗಳಲ್ಲಿ ರಸ್ತೆ, ಆಟದ ಮೈದಾನ, ಸಮುದಾಯ ಭವನ ನಿರ್ಮಿಸಲಾಗುತ್ತಿದೆ. ಸ್ವಂತ ಆಸ್ತಿ ನಿರ್ಮಾಣಕ್ಕೆ ಒತ್ತು ನೀಡಲಾಗುತ್ತಿದೆ. ಎರಡು ಲಕ್ಷ ದನದ ಕೊಟ್ಟಿಗೆ, ಕುರಿ ದೊಡ್ಡಿಗಳನ್ನು ಕಟ್ಟಲಾಗುತ್ತಿದ್ದು, 1.10ಲಕ್ಷ ಈಗಾಗಲೇ ಪೂರ್ಣಗೊಂಡಿದೆ ಎಂದು ತಿಳಿಸಿದರು.
ಕರ್ನಾಟಕವು ಪಂಚಾಯತ್ರಾಜ್ ವಿಕೇಂದ್ರೀಕರಣ ನೀತಿಯನ್ನು ಕೃತಿಗಿಳಿಸಿದ ಸಾಧನೆಗಾಗಿ ಮೂರನೇ ಸ್ಥಾನದ ಪ್ರಶಸ್ತಿ, ಹಣಕಾಸು ವಿಕೇಂದ್ರೀಕರಣ ನೀತಿಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿದಕ್ಕಾಗಿ ಮೊದಲ ಸ್ಥಾನದ ಪ್ರಶಸ್ತಿಗೆ ಪಾತ್ರವಾಯಿತು. ಪಂಚಾಯತ್ ರಾಜ್ ವ್ಯವಸ್ಥೆಯ ಒಟ್ಟಾರೆ ಸಾಧನೆಗಾಗಿ ಕೇರಳ ಮೊದಲ ಸ್ಥಾನ ಪಡೆದರೆ, ಸಿಕ್ಕಿಂ ಎರಡನೇ ಸ್ಥಾನ ಪಡೆಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.