ADVERTISEMENT

‘ವಿಶ್ವಾಸಾರ್ಹತೆ ಕಳೆದುಕೊಂಡ ಸಿಬಿಐ’

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2014, 19:56 IST
Last Updated 18 ಏಪ್ರಿಲ್ 2014, 19:56 IST

ಅಮೃತಸರ (ಪಿಟಿಐ): ‘ಕಳೆದ ಹತ್ತು ವರ್ಷಗಳಲ್ಲಿ ಸಿಬಿಐ ನಿರ್ದೇಶಕರು ಆಡಳಿತಾರೂಢ ಯುಪಿಎ ಸರ್ಕಾರದ ಕೈಗೊಂಬೆಯಾಗಿದ್ದಾರೆ. ಕಾಂಗ್ರೆಸ್‌ ನೇತೃತ್ವದ ಯುಪಿಎ ತನ್ನ ರಾಜಕೀಯ ವೈರಿಗಳನ್ನು ಹಣಿಯಲು ಕೇಂದ್ರೀಯ ತನಿಖಾ ಸಂಸ್ಥೆಯನ್ನು (ಸಿಬಿಐ) ಬಳಸಿ­ಕೊಳ್ಳುತ್ತಿರುವುದರಿಂದ ಅದರ ವಿಶ್ವಾ­ಸಾ­ರ್ಹತೆ ಕುಸಿದಿದೆ’ ಎಂದು ಇಲ್ಲಿನ ಬಿಜೆಪಿ ಅಭ್ಯರ್ಥಿ ಅರುಣ್‌ ಜೇಟ್ಲಿ ಹೇಳಿದರು.

‘ಸಿಬಿಐ ನಿರ್ದೇಶಕರ ಆಯ್ಕೆ ನಡೆ­ಯುವುದು ಸರ್ಕಾರದಿಂದಲೇ ಹೊರತು ಸಮತೋಲಿತವಾದ ನೇಮ­ಕಾತಿ ಮಂಡಳಿಗಳಿಂದ ಅಲ್ಲ. ಹೀಗಾಗಿ ಸಂಸ್ಥೆಯ ನಿರ್ದೇ­ಶಕರನ್ನು ಕೇವಲ ಸರ್ಕಾರ ಮಾತ್ರ ವಲ್ಲದೆ ಆಡಳಿತಾ­ರೂಢ ಪಕ್ಷದ ಪ್ರಮುಖರು ಕೂಡ ನಿಯಂತ್ರಣದಲ್ಲಿ ಇರಿಸಿಕೊಂಡಿದ್ದಾರೆ’ ಎಂದು ರಾಜ್ಯಸಭೆ ಪ್ರತಿಪಕ್ಷ ನಾಯಕರೂ ಆದ ಜೇಟ್ಲಿ ಟೀಕಿಸಿದರು.

‘ಹಲವು ಸಂದರ್ಭಗಳಲ್ಲಿ ಒತ್ತಡಕ್ಕೆ ಸಿಲುಕಿ ಸರ್ಕಾರಕ್ಕೆ ಹತ್ತಿರವಾದವರಿಗೆ ಸಿಬಿಐ ಅನುಕೂಲ ಮಾಡಿಕೊಟ್ಟಿದೆ. ತದ್ವಿರುದ್ಧವಾಗಿ, ಸರ್ಕಾರಕ್ಕೆ ಪ್ರತಿರೋಧ ತೋರುವವರನ್ನು ಬಲಿಪಶು ಮಾಡಿರುವ ಪ್ರಕರಣಗಳೂ ನಡೆದಿವೆ’ ಎಂದು ಜೇಟ್ಲಿ ಹೇಳಿದರು.

ಮುಂಚೂಣಿ ವ್ಯಾಪಾರೋದ್ಯಮಿ­ಯೊ­ಬ್ಬರು ಸಿಬಿಐ ಕುರಿತು ಮಾಡುತ್ತಿ­ರುವ ಆಪಾದನೆಗಳ ಬಗ್ಗೆ  ದೆಹಲಿ­ಯಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ
ಚರ್ಚೆ ನಡೆಯುತ್ತಿದೆ. ಇಂತಹ ಚರ್ಚೆಗಳು ಸಿಬಿಐ ವಿಶ್ವಾಸಾರ್ಹತೆಯನ್ನು ಇನ್ನಷ್ಟು ತಗ್ಗಿಸುತ್ತವೆ ಎಂದು ಹೇಳಿದರು.

‘ಈ ಉದ್ಯಮಿ ಮಾಡುತ್ತಿರುವ ಆಪಾದನೆಗಳ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಸತ್ಯ ಏನೆಂಬುದನ್ನು ತಿಳಿಸಬೇಕಾಗಿದೆ. ಪ್ರತಿಯೊಬ್ಬರೂ ಪ್ರಾಮಾಣಿಕವಾಗಿ ಇರಬೇಕು. ಸಿಬಿಐ ಅಧಿಕಾರಿಗಳಂತೂ ಪ್ರಾಮಾಣಿಕತೆ ರುಜುವಾತು ಪಡಿಸುವ ಬಗ್ಗೆ ಇನ್ನಷ್ಟು ಜಾಗೃತವಾಗಿರಬೇಕು’ ಎಂದು ಜೇಟ್ಲಿ ಹೇಳಿದರು.

ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲ ಹಾಗೂ ಮಹಾತ್ಮ ಗಾಂಧಿ ಅವರ ಮೊಮ್ಮಗ ಗೋಪಾಲ ಗಾಂಧಿ ಅವರು ಸಿಬಿಐನ್ನು ‘ಕೀಳುದರ್ಜೆಯ ತಂತ್ರೋಪಾಯಗಳ ಸಂಸ್ಥೆ’ ಎಂದು ಟೀಕಿಸಿರುವುದಕ್ಕೆ ಜೇಟ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.