ದ್ರಾಸ್, ಜಮ್ಮುಮತ್ತು ಕಾಶ್ಮೀರ್ (ಪಿಟಿಐ): ಸೇನೆಯ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ಸರ್ಕಾರ ಸಂಪೂರ್ಣ ಬದ್ಧವಾಗಿದ್ದು, ಸವಾಲುಗಳನ್ನು ಎದುರಿಸಲು ಸೇನೆಯು ‘ಸರ್ವ ಸನ್ನದ್ಧ’ವಾಗಿದೆ ಎಂದು ಭೂಸೇನಾ ಮುಖ್ಯಸ್ಥ ಜನರಲ್ ಬಿಕ್ರಂ ಸಿಂಗ್ ಶುಕ್ರವಾರ ತಿಳಿಸಿದ್ದಾರೆ.
15ನೇ ಕಾರ್ಗಿಲ್ ವಿಜಯ ದಿವಸ್ ಸಮಾರಂಭದಲ್ಲಿ ಪಾಲ್ಗೊಳ್ಳಲು ಇಲ್ಲಿಗೆ ಬಂದಿರುವ ಬಿಕ್ರಂ ಸಿಂಗ್ ಸುದ್ದಿಗಾರರೊಂದಿಗೆ ಮಾತನಾಡಿದರು.
‘ಗಡಿಯಲ್ಲಿರುವ ಸೇನೆಯು ದೇಶದ ಸಾರ್ವಭೌಮತ್ವ ಹಾಗೂ ಏಕತೆಯನ್ನು ರಕ್ಷಿಸುವ ಸಾಮರ್ಥ್ಯ ಹೊಂದಿದೆ ಎಂದು ಸೇನಾ ಮುಖ್ಯಸ್ಥನಾಗಿ ನಾನು ಭರವಸೆ ನೀಡುವೆ’ ಎಂದು ನುಡಿದಿದ್ದಾರೆ.
ಕಾರ್ಗಿಲ್ ಯುದ್ಧದ ಬಳಿಕ ಸೇನೆಯಲ್ಲಿನ ನ್ಯೂನತೆಯ ಪರಿಸ್ಥಿತಿಯಲ್ಲಿ ಬದಲಾವಣೆಗಳಾಗಿವೆಯೇ? ಎಂಬ ಪ್ರಶ್ನೆಗೆ ಸಿಂಗ್, ‘ಹೌದು, ಪರಿಸ್ಥಿತಿ ಬದಲಾಗಿವೆ. ಕೇವಲ ಭಾರತೀಯ ಸೇನೆಯಲ್ಲಿ ಮಾತ್ರವೇ ಕೊರತೆಗಳಿಲ್ಲ. ಬದಲಾಗಿ ಎಲ್ಲಾ ಸೇನೆಗಳಲ್ಲಿ ನ್ಯೂನತೆಗಳಿವೆ. ಆದರೆ ಪರಿಸ್ಥಿತಿಗಳು ಸುಧಾರಿಸಿವೆ. ಸೇನೆಯ ಅಗತ್ಯಗಳನ್ನು ಪೂರೈಸಲು ಪ್ರಸ್ತುತ ಸರ್ಕಾರ ಸಂಪೂರ್ಣ ಬದ್ಧವಾಗಿದೆ. ನಮ್ಮ ಕೊರತೆಗಳು ನೀಗಿವೆ. ಸವಾಲುಗಳಿಗೆ ಎದೆಯೊಡ್ಡಲು ಸೇನೆಯು ಸರ್ವ ಸನ್ನದ್ಧವಾಗಿದೆ. ಈ ಬಗ್ಗೆ ನಾನು ವೈಯಕ್ತಿಕವಾಗಿ ಆಶ್ವಾಸನೆ ನೀಡುವೆ’ ಎಂದು ಸಿಂಗ್ ಪ್ರತಿಕ್ರಿಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.