ನವದೆಹಲಿ (ಪಿಟಿಐ): ತಾಂತ್ರಿಕ ದೋಷದ ಪತ್ತೆಗಾಗಿ ಭಾರತವು ‘ಸುಕೋಯ್–30’ ಯುದ್ಧ ವಿಮಾನಗಳ ಹಾರಾಟ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.
ಮಹಾರಾಷ್ಟ್ರದ ಪುಣೆ ಬಳಿ ಇತ್ತೀಚೆಗೆ ಯುದ್ಧ ವಿಮಾನ ಸುಕೋಯ್–30 ಇಳಿಯುತ್ತಿದ್ದ ವೇಳೆ ಪತನಗೊಂಡಿತ್ತು. ಈ ದುರ್ಘಟನೆಯ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ.
ಈ ಪಡೆಯಲ್ಲಿ ಟ್ವಿನ್ (ಎರಡು) ಎಂಜಿನ್ಗಳುಳ್ಳ ಸುಮಾರು 200 ಸುಕೋಯ್–30 ಯುದ್ಧ ವಿಮಾನಗಳಿದ್ದು, ತಾಂತ್ರಿಕ ಪರಿಶೀಲನೆ ಬಳಿಕವಷ್ಟೇ ಮತ್ತೆ ಆಗಸಕ್ಕೇರಲಿವೆ.
ಭಾರತೀಯ ವಾಯು ಪಡೆಗೆ ಸೇರಿದ ಸುಕೋಯ್–30 ವಿಮಾನವು ಅಕ್ಟೋಬರ್ 14ರಂದು ಇಳಿಯುವ ವೇಳೆ ಬೆಂಕಿ ಕಾಣಿಸಿಕೊಂಡು ಪೈಲಟ್ಗಳ ಕುರ್ಚಿಗಳು ಭಸ್ಮವಾಗಿ ವಿಮಾನ ಪತನಗೊಂಡಿತ್ತು. ಘಟನೆಯಲ್ಲಿ ಪೈಲಟ್ಗಳು ಪ್ರಾಣಾಪಾಯದಿಂದ ಪಾರಾಗಿದ್ದರು. ಆದರೆ ವಿಮಾನ ಛಿದ್ರವಾಗಿತ್ತು!
‘ಇಂಥ ಪ್ರಕರಣ ಬಳಿಕ ಸಾಮಾನ್ಯವಾಗಿ ಮಾಡಲಾಗುವಂತೆ ಸುಕೋಯ್–30 ಯುದ್ಧ ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ. ಘಟನೆಯ ಬಗ್ಗೆ ವಿಚಾರಣೆ ಚಾಲ್ತಿಯಲ್ಲಿದೆ. ವಿಮಾನವನ್ನು ಕೆಲವು ನಿರ್ದಿಷ್ಟ ತಪಾಸಣೆಗೆ ಒಳಪಡಿಸುತ್ತಿದ್ದಾರೆ. ತಪಾಸಣೆ ಮುಗಿದ ಬಳಿಕ ಹಾಗೂ ವಿಚಾರಣಾ ತಂಡ ತೃಪ್ತಿ ವ್ಯಕ್ತ ಪಡಿಸಿದ ಬೆನ್ನಲ್ಲೆ ಸುಕೋಯ್–30 ಯುದ್ಧ ವಿಮಾನಗಳು ಮತ್ತೆ ಹಾರಾಡಲಿವೆ’ ಎಂದು ವಾಯು ಪಡೆಯು ಪ್ರಕಟಣೆಯಲ್ಲಿ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.