ADVERTISEMENT

104 ಗಣ್ಯರಿಗೆ ಪದ್ಮ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2015, 7:07 IST
Last Updated 30 ಮಾರ್ಚ್ 2015, 7:07 IST

ನವದೆಹಲಿ (ಪಿಟಿಐ):  ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ಸೋಮವಾರ ಇಲ್ಲಿ 104 ಗಣ್ಯರಿಗೆ ಪದ್ಮ  ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.

ಇದೇ ಸಂದರ್ಭದಲ್ಲಿ, ಸ್ವಾತಂತ್ರ್ಯ ಹೋರಾಟಗಾರ ದಿವಂಗತ ಮದನ್ ಮೋಹನ್ ಮಾಳವೀಯ (ಮರಣೋತ್ತರ) ಅವರಿಗೆ ಪ್ರಕಟಿಸಲಾದ ಭಾರತ ರತ್ನ ಪುರಸ್ಕಾರವನ್ನೂ, ಅವರ ಕುಟುಂಬಕ್ಕೆ ರಾಷ್ಟ್ರಪತಿ ಅವರು ಪ್ರದಾನ ಮಾಡಿದರು.

66ನೇ ಗಣ­ರಾಜ್ಯೋತ್ಸವ ಅಂಗವಾಗಿ ಕೇಂದ್ರ ಸರ್ಕಾ­ರ ಒಟ್ಟು 104 ಗಣ್ಯರಿಗೆ ಪದ್ಮ ಪ್ರಶಸ್ತಿಗಳನ್ನು ಪ್ರಕಟಿಸಿತ್ತು. ಇದ­ರಲ್ಲಿ 9 ಪದ್ಮ ವಿಭೂಷಣ, 20 ಪದ್ಮ ಭೂಷಣ ಹಾಗೂ 75 ಪದ್ಮಶ್ರೀ ಪುರ­ಸ್ಕೃತರು ಸೇರಿದ್ದಾರೆ.

ಕರ್ನಾ­ಟಕದವರಾದ ಧರ್ಮ­ಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ (ಪದ್ಮ ವಿಭೂಷಣ), ಸಿದ್ಧ­ಗಂಗಾ­­ಮಠದ ಶಿವಕುಮಾರ ಸ್ವಾಮೀಜಿ ಮತ್ತು ವಿಜ್ಞಾನಿ ಡಾ. ಖರಗ್‌ ಸಿಂಗ್‌ ವಾಲ್ಡಿಯಾ (ಪದ್ಮ ಭೂಷಣ),  ವಿಜ್ಞಾನಿ ಎಸ್‌. ಅರು­ಣನ್‌, ಇನ್ಫೊಸಿಸ್‌ ಸಂಸ್ಥಾಪಕ­ರಲ್ಲಿ ಒಬ್ಬರಾದ ಟಿ.ವಿ. ಮೋಹನ್‌ದಾಸ್‌ ಪೈ (ಪದ್ಮಶ್ರೀ) ಅವ­ರಿಗೆ ಪ್ರಶಸ್ತಿ ಗೌರವ ಲಭಿಸಿದೆ. ದ್ಗುರು

ಪದ್ಮ ವಿಭೂಷಣ ಪುರಸ್ಕೃತರಲ್ಲಿ ಬಿಜೆಪಿ ಹಿರಿಯ ನಾಯಕ ಎಲ್‌.ಕೆ. ಅಡ್ವಾಣಿ, ಬಾಲಿ­ವುಡ್‌ ನಟ­ರಾದ ಅಮಿ­ತಾಭ್‌ ಬಚ್ಚನ್‌ ಮತ್ತು ದಿಲೀಪ್‌ ಕುಮಾರ್‌, ಪಂಜಾಬ್‌ ಮುಖ್ಯ­­ಮಂತ್ರಿ ಪ್ರಕಾಶ್‌ ಸಿಂಗ್‌ ಬಾದಲ್‌, ಹಿರಿಯ ವಕೀಲ ಕೆ.ಕೆ. ವೇಣು­­­ಗೋಪಾಲ್‌, ಪರ­ಮಾಣು ವಿಜ್ಞಾನಿ ಪ್ರೊ. ಎಂ.ಆರ್‌. ಶ್ರೀನಿವಾ­ಸನ್‌, ವಾಣಿ­ಜ್ಯೋದ್ಯಮಿ ಕರೀಂ ಅಲ್‌ ಹುಸೇನಿ ಆಗಾ ಖಾನ್‌, ಉತ್ತರ­ಪ್ರದೇ­ಶದ ಜಗದ್ಗುರು ರಮಾ­ನಂದಾ­ಚಾ­ರ್ಯ­­ಸ್ವಾಮಿ ರಾಮಭದ್ರಾ­ಚಾರ್ಯ ಇದ್ದಾರೆ.

ಪದ್ಮ ಭೂಷಣ ಪುರಸ್ಕೃತರಲ್ಲಿ ಮಾಜಿ ಮುಖ್ಯ ಚುನಾ­ವಣಾ ಆಯುಕ್ತ ಎನ್‌. ಗೋಪಾಲ­ಸ್ವಾಮಿ, ಮೈಕ್ರೊಸಾಫ್ಟ್‌ ಮುಖ್ಯಸ್ಥ ಬಿಲ್‌ ಗೇಟ್ಸ್‌ ಮತ್ತು ಅವರ ಪತ್ನಿ ಮೆಲಿಂಡಾ, ಲೋಕಸಭೆ ಮಾಜಿ ಸೆಕ್ರೆ­ಟರಿ ಜನರಲ್‌ ಸುಭಾಶ್‌ ಸಿ ಕಶ್ಯಪ್‌, ಪತ್ರಕರ್ತರಾದ ರಜತ್‌ ಶರ್ಮ ಮತ್ತು ಸ್ವಪನ್‌ ದಾಸ್‌ಗುಪ್ತ, ಹಿರಿಯ ವಕೀಲ ಹರೀಶ್‌ ಸಾಳ್ವೆ, ಹೃದ್ರೋಗತಜ್ಞ ಅಶೋಕ್‌ ಸೇಠ್‌, ಭಾರತ ಸಂಜಾತ ಅಮೆರಿಕ ಗಣಿತಶಾಸ್ತ್ರಜ್ಞ ಮಂಜುಲ್‌ ಭಾರ್ಗವ, ಹಿರಿಯ ಕ್ರೀಡಾಪಟು ಸತ್ಪಾಲ್‌, ಸ್ವಾಮಿ ಸತ್ಯಮಿತ್ರಾನಂದ  ಗಿರಿ ಸೇರಿದ್ದಾರೆ.

ಪದ್ಮಶ್ರೀ ಪುರಸ್ಕೃತರಲ್ಲಿ ಚಿತ್ರ ನಿರ್ದೇಶಕ ಸಂಜಯ್‌ ಲೀಲಾ ಬನ್ಸಾಲಿ, ಕ್ರೀಡಾ­ಪಟುಗಳಾದ ಪಿ.ವಿ. ಸಿಂಧೂ, ಮೈಥಿಲಿ­ರಾಜ್‌, ಸಬಾ ಅಂಜುಮ್‌, ಎನ್‌ಸಿಇ­ಆರ್‌ಟಿ ಮಾಜಿ ನಿರ್ದೇಶಕ ಜೆ.ಎಸ್‌. ರಜಪೂತ್‌, ಕರ್ನಾಟಕ ಸಂಗೀತಗಾರ್ತಿ ಸುಧಾ ರಘುನಾಥನ್‌, ಜಗತ್‌ ಗುರು ಅಮೃತ ಸೂರ್ಯಾ­ನಂದ ಮಹಾರಾಜ, ದಾವೂದಿ ಬೋಹ್ರಾ ಸಮುದಾಯದ ನಾಯಕ ದಿ. ಸೈಯೇಂದ್ರ ಮೊಹಮ್ಮದ್‌ ಬರ್ಹಾನುದ್ದೀನ್‌ ಒಳಗೊಂಡಿದ್ದಾರೆ.

ಪ್ರಶಸ್ತಿ ಪುರಸ್ಕೃತರಲ್ಲಿ ತಲಾ 17 ಮಹಿ­ಳೆಯರು, ವಿದೇಶಿಯರು, ಎನ್‌ಆರ್‌ಐ­­ಗಳು, ಪಿಐ­ಒಗಳು ಹಾಗೂ­ ನಾಲ್ವರಿಗೆ ಮರಣೋ­ತ್ತ­ರ­ವಾಗಿ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT