ಹೈದರಾಬಾದ್ (ಪಿಟಿಐ): ವಿಜಯವಾಡ ಮೂಲದ ಡಾ. ಎನ್ಟಿಆರ್ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ನಡೆಸಿದ ಸ್ನಾತಕೋತ್ತರ ವೈದ್ಯಕೀಯ ಪದವಿ ಪ್ರವೇಶ ಪರೀಕ್ಷೆಯಲ್ಲಿ ನಡೆದ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸುತ್ತಿರುವ ಆಂಧ್ರಪ್ರದೇಶ ಪೊಲೀಸರು, ಮಂಗಳವಾರ ಏಳು ಬ್ರೋಕರ್ಗಳು ಮತ್ತು ನಾಲ್ವರು ಅಭ್ಯರ್ಥಿಗಳು ಸೇರಿದಂತೆ 11ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಿದ್ದಾರೆ.
ತನಿಖೆಯಲ್ಲಿ ಪ್ರಶ್ನೆಪತ್ರಿಕೆಗಳ ಸೋರಿಕೆ ಖಚಿತವಾಗಿದ್ದು, ಈ ಹಿನ್ನೆಲೆಯಲ್ಲಿ ಹಗರಣಕ್ಕೆ ಸಂಬಂಧಿಸಿದಂತೆ ಒಂಬತ್ತು ಬ್ರೋಕರ್ಗಳು ಮತ್ತು 11 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 20 ಜನರನ್ನು ಬಂಧಿಸುವಲ್ಲಿ ಸಿಐಡಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಣಿಪಾಲ ಮುದ್ರಣ ತಂತ್ರಜ್ಞಾನ ಸಂಸ್ಥೆಯಲ್ಲಿ ಪ್ರಶ್ನೆಪತ್ರಿಕೆಗಳು ಸೋರಿಕೆ ಆಗಿರುವುದನ್ನು ಸಿಐಡಿ ತನಿಖೆ ಬಹಿರಂಗ ಪಡಿಸಿದೆ. ಹಗರಣದ ತನಿಖೆ ಮುಂದುವರಿದಿದ್ದು, ಪ್ರಮುಖ ಆರೋಪಿಯನ್ನು ಶೀಘ್ರವೇ ಬಂಧಿಸಲಾಗುತ್ತದೆ ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ.
ಬ್ರೋಕರ್ಗಳಾದ ಭೂಷಣ್ ರೆಡ್ಡಿ, ಪಾಲ್ಸನ್, ಕಿಷ್ಟಪ್ಪ, ಚಕ್ರವರ್ತಿ, ವಿಜಯ್, ಅಭಿಮನ್ಯು ಹಾಗೂ ಪ್ಯಾಟ್ರಿಕ್ ಮತ್ತು ಅಭ್ಯರ್ಥಿಗಳಾದ ರಾಮರಾವ್, ಸಾಯಿ ಪ್ರಣೀತ್, ಕೆ. ರಮಣ ಹಾಗೂ ಪಿ. ಭರತ್ ಕುಮಾರ್ ಅವರನ್ನು ಬಂಧಿಸಿ, ಅಕ್ರಮಕ್ಕೆ ಬಳಸಿದ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ದಾವಣಗೆರೆಯ ಅಮೀರ್ ಅಹಮದ್ ಮತ್ತು ಬ್ರೋಕರ್ಗಳ ಸಂಚಿನಿಂದಾಗಿ ಪ್ರಶ್ನೆಪತ್ರಿಕೆಗಳನ್ನು ಸೋರಿಕೆ ಸಾಧ್ಯವಾಗಿದೆ. ದಾವಣಗೆರೆಯವರೇ ಆದ ಪಾಲ್ಸನ್, ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಚು ನಡೆಸಿದ ಬ್ರೋಕರ್ಗಳಲ್ಲೊಬ್ಬ. ಇತರ ಬ್ರೋಕರ್ಗಳಾದ ಕಿಷ್ಟಪ್ಪ ಮತ್ತು ಚಕ್ರವರ್ತಿ ಅವರ ಮೂಲಕ ಕ್ರಮವಾಗಿ 7, 15 ಹಾಗೂ 26ನೇ ರ್್ಯಾಂಕ್ ಗಳಿಸಿದ ಅಭ್ಯರ್ಥಿಗಳಾದ ಭರತ್ ಕುಮಾರ್, ಸಾಯಿ ಪ್ರಣೀತ್ ಹಾಗೂ ಕೆ. ರಮಣ ಅವರಿಗೆ ಪ್ರಶ್ನೆಪತ್ರಿಕೆಗಳನ್ನು ಸೋರಿಕೆ ಮಾಡಿರುವುದನ್ನು ಸಿಐಡಿ ಪತ್ತೆಹಚ್ಚಿದೆ ಎಂದು ವಿವರಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.