ಶಿಮ್ಲಾ/ನವದೆಹಲಿ/ಪಟ್ನಾ (ಪಿಟಿಐ): ಗುಜರಾತ್ ಯುವತಿ ಮೇಲಿನ ಅಕ್ರಮ ಕಣ್ಗಾವಲು ಪ್ರಕರಣದ ನ್ಯಾಯಾಂಗ ತನಿಖಾ ಆಯೋಗಕ್ಕೆ ನ್ಯಾಯಾಧೀಶರೊಬ್ಬರನ್ನು ಮೇ 16ಕ್ಕಿಂತ (ಚುನಾವಣೆಯ ಮತ ಎಣಿಕೆ ದಿನಕ್ಕಿಂತ) ಮೊದಲೇ ನೇಮಿಸಲಾಗುವುದು ಎಂದು ಕೇಂದ್ರ ಸರ್ಕಾರ ಶುಕ್ರವಾರ ಹೇಳಿದೆ.
ಗುಜರಾತ್ ಮುಖ್ಯಮಂತ್ರಿ, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಸೂಚನೆಯಂತೆ ಯುವತಿಯೊಬ್ಬಳ ಚಲನವಲನದ ಮೇಲೆ ನಿಗಾ ಇಡಲಾಗಿತ್ತು ಎಂಬ ಆರೋಪದಿಂದ ಈ ಪ್ರಕರಣ ಭಾರಿ ವಿವಾದ ಸೃಷ್ಟಿಸಿತ್ತು.
ತೀವ್ರ ಖಂಡನೆ: ಆದರೆ, ಕೇಂದ್ರ ಸರ್ಕಾರದ ಹೇಳಿಕೆಯನ್ನು ಬಿಜೆಪಿಯ ಹಿರಿಯ ಮುಖಂಡ ಅರುಣ್ ಜೇಟ್ಲಿ ಟೀಕಿಸಿದ್ದಾರೆ.
‘ಮೋದಿ ಅವರನ್ನು ಗುರಿಯಾಗಿಸಿಕೊಂಡು ನಡೆಸಲಾಗುತ್ತಿರುವ ಈ ರಾಜಕೀಯ ಮತ್ತು ದುರುದ್ದೇಶ ಪೂರಿತ ತನಿಖೆಯಲ್ಲಿ ತೊಡಗಿಕೊಳ್ಳಲು ಯಾವ ನ್ಯಾಯಮೂರ್ತಿಯೂ ಸ್ವತಃ ಮುಂದಾಗುವುದಿಲ್ಲ’ ಎಂದು ಅವರು ಹೇಳಿದ್ದಾರೆ.
ಶಿಂಧೆ ಸಮರ್ಥನೆ: ‘ಯುವತಿ ಮೇಲಿನ ಅಕ್ರಮವಾಗಿ ಬೇಹುಗಾರಿಕೆ ಪ್ರಕರಣದ ತನಿಖೆಗಾಗಿ ನ್ಯಾಯಾಂಗ ಆಯೋಗವನ್ನು ರಚಿಸಲು ಕೇಂದ್ರ ಸಂಪುಟ ಈ ಹಿಂದೆಯೇ ನಿರ್ಧರಿಸಿತ್ತು. ಮೇ 16ರ ಒಳಗಾಗಿ ಆಯೋಗಕ್ಕೆ ನ್ಯಾಯಾಧೀಶರನ್ನು ನಾವು ನೇಮಿಸಲಿದ್ದೇವೆ’ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಶಿಮ್ಲಾದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಚುನಾವಣೆಯ ಮಧ್ಯದಲ್ಲಿ ಈ ವಿಚಾರವು ನೀತಿ ಸಂಹಿತೆ ವ್ಯಾಪ್ತಿಯಲ್ಲಿ ಬರುವುದಿಲ್ಲವೇ ಎಂದು ಕೇಳಿದಾಗ, ‘ತನಿಖಾ ಆಯೋಗ ರಚಿಸುವ ನಿರ್ಧಾರವನ್ನು ನಾಲ್ಕು ತಿಂಗಳ ಹಿಂದೆಯೇ ಕೈಗೊಂಡಿರುವುದರಿಂದ ಇದು ನೀತಿ ಸಂಹಿತೆ ಅಡಿಯಲ್ಲಿ ಬರುವುದಿಲ್ಲ’ ಎಂದು ಅವರು ಉತ್ತರಿಸಿದರು
ನ್ಯಾಯಾಂಗ ತನಿಖೆ: ಮೋದಿ ಅವರ ಸೂಚನೆ ಮೇರೆಗೆ 2009ರಲ್ಲಿ ಯುವತಿಯೊಬ್ಬರ ಚಲನವಲನಗಳ ಮೇಲೆ ನಿಗಾ ಇಡಲಾಗಿತ್ತು ಎಂಬ ಆರೋಪದ ತನಿಖೆಗಾಗಿ ಕೇಂದ್ರ ಸರ್ಕಾರ ಕಳೆದ ಡಿಸೆಂಬರ್ 26ರಂದು ನ್ಯಾಯಾಂಗ ಆಯೋಗ ರಚಿಸುವ ನಿರ್ಧಾರ ಕೈಗೊಂಡಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.