ನವದೆಹಲಿ: ‘ಉತ್ತರ ಪ್ರದೇಶದಲ್ಲಿ ಬಿಜೆಪಿ ಎಬ್ಬಿಸಿರುವುದು ಹೊಂಡದಲ್ಲಿನ ಸಣ್ಣ ಅಲೆಗಳಲ್ಲ, ಬದಲಿಗೆ ಸುನಾಮಿಯ ದೈತ್ಯ ಅಲೆ, ಆದ್ದರಿಂದ ವಿರೋಧ ಪಕ್ಷಗಳು 2019ರ ಚುನಾವಣೆಯನ್ನು ಮರೆತು 2024ರ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು’ ಎಂದು ನ್ಯಾಷನಲ್ ಕಾನ್ಫರೆನ್ಸ್ ಮುಖಂಡ ಒಮರ್ ಅಬ್ದುಲ್ಲಾ ಸಲಹೆ ಮಾಡಿದ್ದಾರೆ.
ಮೋದಿ ಅವರನ್ನು ಬಿಟ್ಟರೆ ಇಡೀ ದೇಶವೇ ಒಪ್ಪಿಕೊಳ್ಳುವಂತಹ ಮುಖಂಡರು ಯಾವ ಪಕ್ಷದಲ್ಲೂ ಇಲ್ಲ. ಆದ್ದರಿಂದ 2019ರ ಮಹಾಚುನಾವಣೆಯಲ್ಲಿ ಬಿಜೆಪಿಗೆ ಸವಾಲೆಸೆಯುವ ಸಾಮರ್ಥ್ಯ ಯಾವ ಪಕ್ಷಕ್ಕೂ ಇಲ್ಲ ಎಂದು ವಿಶ್ಲೇಷಿಸಿದ್ದಾರೆ.
ವಿರೋಧ ಪಕ್ಷಗಳು ಬಿಜೆಪಿಯನ್ನು ಟೀಕಿಸುವ ತಂತ್ರಗಾರಿಕೆಯ ಬದಲು ಸಕಾರಾತ್ಮಕ ತಂತ್ರವನ್ನು ರೂಪಿಸಿಕೊಂಡರೆ ಒಳಿತು. ಪಂಜಾಬ್, ಮಣಿಪುರ ಮತ್ತು ಗೋವಾ ಫಲಿತಾಂಶವನ್ನು ನೋಡಿದರೆ ಬಿಜೆಪಿ ಮಣಿಸುವುದು ಸಾಧ್ಯ ಎಂಬ ಆಶಾಭಾವನೆ ಹುಟ್ಟಿಸಿದೆ ಎಂದು ಟ್ವೀಟ್ ಮಾಡಿದ್ದಾರೆ.
ಬರೀ ಮೋದಿ ಅವರನ್ನು ಟೀಕಿಸಿದರೆ ಪ್ರಯೋಜನವಿಲ್ಲ, ಬದಲಿಗೆ ಮತದಾರರ ಜೀವನಮಟ್ಟ ಸುಧಾರಣೆಗೆ ಏನು ಮಾಡುತ್ತೇವೆ ಎಂಬುದನ್ನು ವಿರೋಧ ಪಕ್ಷಗಳು ಹೇಳಿದರೆ ಪರಿಸ್ಥಿತಿ ಬದಲಾಗಬಹುದು ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.