ನವದೆಹಲಿ: 'ಮಾನಸಿಕ ಅಸ್ವಸ್ಥೆಯೊಬ್ಬರು ತನ್ನ 8 ತಿಂಗಳ ಮಗುವಿನ ಶಿರಚ್ಛೇದಿಸಿ, ದೇಹವನ್ನು ತುಂಡರಿಸಿ ಕೊಂದಿರುವ ಘಟನೆ ಇಲ್ಲಿನ ಅಮನ್ ವಿಹಾರ ಪ್ರದೇಶದಲ್ಲಿ ನಡೆದಿದೆ’ ಎಂದು ಪೊಲೀಸರು ಹೇಳಿದ್ದಾರೆ.
ಶುಕ್ರವಾರ ರಾತ್ರಿ ಈ ನಡೆದಿದೆ. ಘಟನೆ ವೇಳೆ ಆಕೆಯ ಗಂಡ ಕೆಲಸದ ಕಾರಣ ಮನೆಯಿಂದ ಹೊರ ಹೋಗಿದ್ದರು. ಇನ್ನಿಬ್ಬರು ಹೆಣ್ಣು ಮಕ್ಕಳು ಅಜ್ಜಿಯ ಮನೆಯಲ್ಲಿದ್ದರು ಎನ್ನಲಾಗಿದೆ.
ತಡರಾತ್ರಿ ಗಂಡ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.
‘ನಾನು ಮನೆಗೆ ಬಂದಾಗ ಹೆಂಡತಿ ಬಾಗಿಲು ತೆರೆಯಲಿಲ್ಲ. ಅನುಮಾನಗೊಂಡು ಬಾಗಿಲು ಮುರಿದು ಒಳಗೆ ಹೋದೆ. ಮಗುವಿನ ತಲೆ ನೆಲದ ಮೇಲೆ ಬಿದ್ದಿತ್ತು. ಶವವನ್ನು ಆಕೆ ತೊಡೆಯ ಮೇಲೆ ಮಲಗಿಸಿಕೊಂಡಿದ್ದಳು’ ಎಂದು ಮಗುವಿನ ತಂದೆ ಹೇಳಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ತಮ್ಮ 2 ತಿಂಗಳ ಮಗುವನ್ನೂ ಆಕೆ ಕೊಲೆ ಮಾಡಿದ್ದಳು. ಆದರೆ ಅವಳ ಮಾನಸಿಕ ಸ್ಥಿತಿಯನ್ನು ಗಮನದಲ್ಲಿರಿಸಿ ಪೊಲೀಸರಿಗೆ ವಿಷಯ ತಿಳಿಸಿರಲಿಲ್ಲ ಎಂದೂ ಅವರು ಹೇಳಿಕೆ ನೀಡಿದ್ದಾರೆ.
ಘಟನೆ ವೇಳೆ ಮಹಿಳೆ ತನ್ನ ದೇಹಕ್ಕೂ ಹಾನಿ ಮಾಡಿಕೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಪ್ರಕರಣ ಸಂಬಂಧ ತನಿಖೆ ಆರಂಭಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.