ADVERTISEMENT

ಪೊಲೀಸರ ಬೂಟು ನೆಕ್ಕುವಂತೆ ಬಲವಂತ: ದಲಿತ ವ್ಯಕ್ತಿ ಆರೋಪ

​ಪ್ರಜಾವಾಣಿ ವಾರ್ತೆ
Published 3 ಜನವರಿ 2018, 20:32 IST
Last Updated 3 ಜನವರಿ 2018, 20:32 IST

ಅಹಮದಾಬಾದ್‌: ತಾವು ದಲಿತ ಎಂದು ಗೊತ್ತಾದ ಬಳಿಕ ಕನಿಷ್ಠ 15 ಪೊಲೀಸ್‌ ಅಧಿಕಾರಿಗಳ ಬೂಟು ನೆಕ್ಕುವಂತೆ ಬಲವಂತ ಮಾಡಲಾಗಿದೆ ಎಂದು ಗುಜರಾತಿನ ಹರ್ಷ ಜಾದವ್‌ ದೂರು ದಾಖಲಿಸಿದ್ದಾರೆ.

ಕಾನ್‌ಸ್ಟೆಬಲ್‌ ವಿನೋದ್‌ಭಾಯಿ ಬಾಬುಭಾಯಿ ಡಿಸೆಂಬರ್‌ 28ರಂದು ಯಾವುದೇ ಪ್ರಚೋದನೆ ಇಲ್ಲದೆ ತಮಗೆ ಬೆತ್ತದಿಂದ ಹೊಡೆದು ಬೆರಳು ಮುರಿದಿದ್ದಾರೆ. ತಮ್ಮ ಕುಟುಂಬದ ಸದಸ್ಯರನ್ನು ನಿಂದಿಸಿದ್ದಾರೆ. ಬಳಿಕ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ತಮ್ಮನ್ನು ಲಾಕಪ್‌ನಲ್ಲಿ ಕೂಡಿ ಹಾಕಲಾಯಿತು ಎಂದು ದೂರಿದ್ದಾರೆ.

‘ಜಾತಿ ಯಾವುದು ಎಂದು ಕೆಲವು ಅಧಿಕಾರಿಗಳು ಪ್ರಶ್ನಿಸಿದರು. ‘ದಲಿತ’ ಎಂದು ಹೇಳಿದಾಗ ವಿನೋದ್‌ಭಾಯಿ ಅವರ ಕಾಲುಮುಟ್ಟಿ ಕ್ಷಮೆ ಕೇಳಲು ಬಲ
ವಂತ ಮಾಡಿದರು. ಜಾದವ್‌ ಹಾಗೆಯೇ ಮಾಡಿದರು. ಬಳಿಕ, ಅಧಿಕಾರಿಗಳ ಬೂಟು ನೆಕ್ಕುವಂತೆ ಮಾಡಲಾಯಿತು ಎಂದು ದೂರಿನಲ್ಲಿ ‌ ಹೇಳಿದ್ದಾರೆ’ ಎಂದು ಪೊಲೀಸ್‌ ಅಧಿಕಾರಿ ದೇಸಾಯಿ ಮಾಹಿತಿ ನೀಡಿದ್ದಾರೆ.

ADVERTISEMENT

ಜಾದವ್‌ ದೂರು ನೀಡಿದ ಬಳಿಕ ವಿನೋದ್‌ಭಾಯಿ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. ಅಪರಾಧ ತನಿಖಾ ದಳವು ಪ್ರಕರಣದ ತನಿಖೆ ನಡೆಸುತ್ತಿದೆ ಎಂದು ದೇಸಾಯಿ ಹೇಳಿದ್ದಾರೆ.

‘ಕಾನ್‌ಸ್ಟೆಬಲ್‌ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಜಾದವ್‌ರನ್ನು ಬಂಧಿಸಲಾಗಿತ್ತು. ಅವರನ್ನು ಡಿ. 29ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಅಲ್ಲಿ ಈ ಬಗ್ಗೆ ಅವರು ಏನನ್ನೂ ಹೇಳಿರಲಿಲ್ಲ. ಡಿ. 30 ಅಥವಾ 31ರಂದೂ ಅವರು ದೂರು ನೀಡಲಿಲ್ಲ’ ಎಂದು ಡಿಸಿಪಿ ಗಿರೀಶ್‌ ಪಾಂಡ್ಯ ಹೇಳಿದ್ದಾರೆ.

ಜನರ ಗುಂಪೊಂದು ಪೊಲೀಸ್‌ ಠಾಣೆಗೆ ಸೋಮವಾರ ಮುತ್ತಿಗೆ ಹಾಕಿ ಕಾನ್‌ಸ್ಟೆಬಲ್‌ ವಿರುದ್ಧ ದೂರು ದಾಖಲಿಸುವಂತೆ ಒತ್ತಾಯಿಸಿತು. ಅದರಂತೆ ದೂರು ದಾಖಲಿಸಿಕೊಳ್ಳಲಾಗಿದೆ. ತನಿಖೆ ನಡೆಯುತ್ತಿದೆ ಎಂದು ಪಾಂಡ್ಯ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.