ADVERTISEMENT

ಹತ್ಯೆಗೆ ಸಂಚು: ತೊಗಾಡಿಯಾ

​ಪ್ರಜಾವಾಣಿ ವಾರ್ತೆ
Published 16 ಜನವರಿ 2018, 19:59 IST
Last Updated 16 ಜನವರಿ 2018, 19:59 IST
ಪತ್ರಿಕಾಗೋಷ್ಠಿಯಲ್ಲಿ ಕಣ್ಣೀರಿಟ್ಟ ತೊಗಾಡಿಯಾ –ಪಿಟಿಐ ಚಿತ್ರ
ಪತ್ರಿಕಾಗೋಷ್ಠಿಯಲ್ಲಿ ಕಣ್ಣೀರಿಟ್ಟ ತೊಗಾಡಿಯಾ –ಪಿಟಿಐ ಚಿತ್ರ   

ಅಹಮದಾಬಾದ್‌: ‘ಕೆಲವರು ನನ್ನ ಧ್ವನಿಯನ್ನು ಉಡುಗಿಸಲು ಯತ್ನಿಸುತ್ತಿದ್ದಾರೆ. ರಾಮ ಮಂದಿರ, ರೈತರ ಸಂಕಷ್ಟ ಮತ್ತು ಕಾಶ್ಮೀರಿ ಪಂಡಿತರ ಸಮಸ್ಯೆ, ಗೋಹತ್ಯೆಯಂತಹ ವಿಚಾರಗಳ ಬಗ್ಗೆ ಮಾತನಾಡಲು ಬಿಡುತ್ತಿಲ್ಲ’ ಎಂದು ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಅಂತರರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್‌ ತೊಗಾಡಿಯಾ ಮಂಗಳವಾರ ಆರೋಪಿಸಿದ್ದಾರೆ.

ಸೋಮವಾರ ಬೆಳಿಗ್ಗೆ ನಾಪತ್ತೆಯಾಗಿದ್ದ 62 ವರ್ಷದ ತೊಗಾಡಿಯಾ, ಸಂಜೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮಂಗಳವಾರ ಪತ್ರಿಕಾಗೋಷ್ಠಿ
ಯಲ್ಲಿ ಕಣ್ಣೀರಿಟ್ಟ ಅವರು, ಪೊಲೀಸರು ಎನ್‌ಕೌಂಟರ್‌ ಮಾಡಬಹುದು ಎಂಬ ಭಯದಿಂದ ಅವಿತು ಕುಳಿತಿದ್ದೆ ಎಂದಿದ್ದಾರೆ.

‘ದಶಕದ ಹಿಂದಿನ ಪ್ರಕರಣವೊಂದರಲ್ಲಿ ನನ್ನನ್ನು ಗುರಿ ಮಾಡಲಾಗಿದೆ. ರಾಜಸ್ಥಾನ ಪೊಲೀಸರು ನನ್ನನ್ನು ಬಂಧಿಸಲು ಬಂದಿದ್ದರು. ಎನ್‌ಕೌಂಟರ್‌ನಲ್ಲಿ ನನ್ನನ್ನು ಹತ್ಯೆ ಮಾಡಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದು ನನಗೆ ಯಾರೋ ಹೇಳಿದರು’ ಎಂದು ಅವರು ಹೇಳಿದ್ದಾರೆ.

ADVERTISEMENT

ಆಸ್ಪತ್ರೆಯಿಂದ ಮನೆಗೆ ತೆರಳಿದ ಬಳಿಕ ರಾಜಸ್ಥಾನ ನ್ಯಾಯಾಲಯದ ಮುಂದೆ ಶರಣಾಗುವುದಾಗಿಯೂ ಅವರು ಹೇಳಿದ್ದಾರೆ.

ತೊಗಾಡಿಯಾ ಹೇಳಿದ್ದು: ‘ಸೋಮವಾರ ಬೆಳಿಗ್ಗೆ ನಾನು ಪೂಜೆ ಮಾಡುತ್ತಿದ್ದೆ. ಗುಜರಾತ್ ಪೊಲೀಸರೊಂದಿಗೆ ರಾಜಸ್ಥಾನದ ಪೊಲೀಸರ ದೊಡ್ಡ ತಂಡ
ವೊಂದು ನನ್ನನ್ನು ಎನ್‌ಕೌಂಟರ್‌ಮಾಡಲು ಬರುತ್ತಿದೆ ಎಂಬ ಸಂದೇಶ ಬಂತು.

‘ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ ನಂತರ ವಿಎಚ್‌ಪಿ ಕಾರ್ಯಕರ್ತರೊಬ್ಬರೊಂದಿಗೆ ಆಟೊ ರಿಕ್ಷಾದಲ್ಲಿ ನಗರದ ಥಲ್‌ತೇಜ್‌ ಪ್ರದೇಶಕ್ಕೆ ಹೋದೆ. ಅಲ್ಲಿಂದ ರಾಜಸ್ಥಾನದ ಮುಖ್ಯಮಂತ್ರಿ (ವಸುಂಧರಾ ರಾಜೆ) ಮತ್ತು ಗೃಹ ಸಚಿವರಿಗೆ (ಗುಲಾಬ್‌ಚಂದ್‌ ಕಠಾರಿಯಾ) ದೂರವಾಣಿ ಕರೆ ಮಾಡಿದೆ. ಆದರೆ, ನನ್ನನ್ನು ಬಂಧಿಸಲು ರಾಜಸ್ಥಾನ ಪೊಲೀಸರು ಗುಜರಾತ್‌ಗೆ ತಂಡ ಕಳುಹಿಸಿರುವುದನ್ನು ಅವರು ನಿರಾಕರಿಸಿದರು. ಇದು ನನ್ನಲ್ಲಿ ಮತ್ತಷ್ಟು ಅನುಮಾನ ಮೂಡಿಸಿತು. ನಂತರ ನನ್ನ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿದೆ.

‘ರಾಜಸ್ಥಾನ ವಕೀಲರನ್ನು ಸಂಪರ್ಕಿಸಿ ಬಂಧನ ವಾರಂಟ್‌ ರದ್ದುಗೊಳಿಸುಂತೆ ಮಾಡಿ ಎಂದು ಕೇಳಿಕೊಂಡೆ. ಆದರೆ, ನ್ಯಾಯಾಲಯವೇ ಆದೇಶ
ಹೊರಡಿಸಿರುವುದರಿಂದ ರದ್ದುಗೊಳಿಸುವುದು ಕಷ್ಟ ಎಂದು ಅವರು ಹೇಳಿದರು.

ನನಗೆ ಸಾವಿನ ಭಯವಿಲ್ಲ. ಎನ್‌ಕೌಂಟರ್‌ಗೂ ಹೆದರುವುದಿಲ್ಲ. ಆದರೆ, ನೆಲದ ಕಾನೂನು ಪಾಲಿಸುವಾಗ ನನ್ನನ್ನು ನಾನು ರಕ್ಷಿಸಿಕೊಳ್ಳಲೇಬೇಕು
-ಪ್ರವೀಣ್‌ ತೊಗಾಡಿಯಾ, ವಿಎಚ್‌ಪಿ ಮುಖಂಡ

‘ಸೂಕ್ತ ಸಂದರ್ಭದಲ್ಲಿ ಬಹಿರಂಗ’

‘ನನ್ನ ವಿರುದ್ಧದ ಹಳೆ ಪ್ರಕರಣಗಳನ್ನು ಮತ್ತೆ ತೆರೆಯಲಾಗುತ್ತಿದೆ. ವಿವಿಧ ರಾಜ್ಯಗಳಲ್ಲಿ ನನ್ನನ್ನು ಬಂಧಿಸುವ ಮೂಲಕ ಧ್ವನಿಯನ್ನು ಹತ್ತಿಕ್ಕಲು ಯತ್ನಿಸಲಾಗುತ್ತಿದೆ’ ಎಂದು ತೊಗಾಡಿಯಾ ಆರೋಪಿಸಿದ್ದಾರೆ.

‘ಯಾರ ಆದೇಶದ ಪ್ರಕಾರ ಪೊಲೀಸರು ಈ ಕ್ರಮ ಕೈಗೊಳ್ಳುತ್ತಿದ್ದಾರೆ ಎಂಬುದನ್ನು ಸರಿಯಾದ ಸಮಯಲ್ಲಿ ಸಾಕ್ಷ್ಯಗಳ ಸಮೇತ ಬಹಿರಂಗ ಪಡಿಸುತ್ತೇನೆ’ ಎಂದು ಅವರು ಹೇಳಿದ್ದಾರೆ.

ವಿಎಚ್‌ಪಿಯೊಂದಿಗೆ ಗುರುತಿಸಿಕೊಂಡಿರುವ ವೈದ್ಯರಿಗೆ ಸಿಬಿಐ ಬೆದರಿಕೆ ಒಡ್ಡುತ್ತಿದೆ ಎಂದೂ ಅವರು ದೂರಿದ್ದಾರೆ.

ಆರೋಗ್ಯ ಸ್ಥಿರ: ವೈದ್ಯರ ಹೇಳಿಕೆ

ಪ್ರವೀಣ್‌ ತೊಗಾಡಿಯಾ ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ತೊಗಾಡಿಯಾ ಅವರು ಚಿಕಿತ್ಸೆ ಪಡೆಯುತ್ತಿರುವ ಸುದ್ದಿ ಹರಡುತ್ತಲೇ ವಿಎಚ್‌ಪಿಯ ನೂರಾರು ಕಾರ್ಯಕರ್ತರು ಸೋಮವಾರ ರಾತ್ರಿಯೇ ಆಸ್ಪತ್ರೆಯ ಮುಂದೆ ಜಮಾಯಿಸಿದರು.

‘ಆಂಬುಲೆನ್ಸ್‌ನಲ್ಲಿ ತೊಗಾಡಿಯಾ ಅವರನ್ನು ಯಾರೋ ಆಸ್ಪತ್ರೆಗೆ ಕರೆತಂದಿದ್ದರು. ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು’ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ಡಾ. ರೂಪ್‌ಕುಮಾರ್‌ ಅಗರ್‌ವಾಲ್‌ ಹೇಳಿದ್ದಾರೆ.‌

ಅಹಮದಾಬಾದ್‌ನ ಜಂಟಿ ಪೊಲೀಸ್‌ ಕಮಿಷನರ್‌ (ಅಪರಾಧ) ಜೆ.ಕೆ. ಭಟ್‌ ಕೂಡ ವಿಎಚ್‌ಪಿ ಮುಖಂಡನ ಆರೋಗ್ಯ ವಿಚಾರಿಸಿದ್ದಾರೆ. ಅಪರಾಧ ವಿಭಾಗದ ಹಿರಿಯ ಪೊಲೀಸ್‌ ಅಧಿಕಾರಿಗಳು ಕೂಡ ಆಸ್ಪತ್ರೆಗೆ ಭೇಟಿ ನೀಡಿ ಪ್ರಕರಣದ ಬಗ್ಗೆ ಮಾಹಿತಿ ‍ಪಡೆದಿದ್ದಾರೆ.

ತನಿಖೆಗೆ ಕಾಂಗ್ರೆಸ್‌ ಆಗ್ರಹ; ಮೋದಿ, ಶಾ ಕೈವಾಡ–ಹಾರ್ದಿಕ್‌

ಪೊಲೀಸ್‌ ಎನ್‌ಕೌಂಟರ್‌ ಮೂಲಕ ‌ತಮ್ಮನ್ನು ಹತ್ಯೆಗೆ ಯತ್ನಿಸಲಾಗುತ್ತಿದೆ ಎಂದು ತೊಗಾಡಿಯಾ ಮಾಡಿರುವ ಆರೋಪ ಅತ್ಯಂತ ಗಂಭೀರ ಸ್ವರೂಪದ್ದಾಗಿದ್ದು, ಈ ಬಗ್ಗೆ ಸ್ವತಂತ್ರ ತನಿಖೆ ನಡೆಸಬೇಕು ಎಂದು ಗುಜರಾತ್‌ ಕಾಂಗ್ರೆಸ್‌ ಒತ್ತಾಯಿಸಿದೆ.

ಕಾಂಗ್ರೆಸ್‌ ಮುಖಂಡ ಅರ್ಜುನ್‌ ಮೊಧ್ವಾಡಿಯಾ ಅವರು ಆಸ್ಪತ್ರೆಯಲ್ಲಿ ತೊಗಾಡಿಯಾ ಅವರನ್ನು ಭೇಟಿ ಮಾಡಿದ್ದಾರೆ.

‘ಎನ್‌ಕೌಂಟರ್‌ ವಿಚಾರದಲ್ಲಿ ರಾಜಸ್ಥಾನ ಪೊಲೀಸರ ಇತಿಹಾಸ ನಮಗೆಲ್ಲರಿಗೂ ಗೊತ್ತಿದೆ. ಬಿಜೆಪಿ ವಿರುದ್ಧ ಧ್ವನಿ ಎತ್ತಿದವರಿಗೆ ಏನಾಗುತ್ತದೆ ಎಂಬುದೂ ತಿಳಿದಿದೆ. ಹಾಗಾಗಿ, ತೊಗಾಡಿಯಾ ಪ್ರಕರಣವನ್ನು ಸ್ವತಂತ್ರ ತನಿಖೆಗೆ ಒಳಪಡಿಸಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

ಗುಜರಾತ್‌ ಕಾಂಗ್ರೆಸ್‌ ಅಧ್ಯಕ್ಷ ಭರತ್‌ಸಿಂಹ ಸೋಲಂಕಿ ಮತ್ತು ರಾಜ್ಯ ಉಸ್ತುವಾರಿ ಅಶೋಕ್‌ ಗೆಹ್ಲೋಟ್‌ ಕೂಡ ತನಿಖೆಗೆ ಆಗ್ರಹಿಸಿದ್ದಾರೆ.

ಹಾರ್ದಿಕ್ ಭೇಟಿ: ಪಟೇಲ್‌ ಮೀಸಲಾತಿ ಹೋರಾಟದ ನಾಯಕ ಹಾರ್ದಿಕ್‌ ಪಟೇಲ್‌ ಕೂಡ ತೊಗಾಡಿಯಾ ಅವರನ್ನು ಆಸ್ಪತ್ರೆಯಲ್ಲಿ ಭೇಟಿಯಾಗಿದ್ದಾರೆ. ಅವರು, ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರತ್ತ ಬೆಟ್ಟು ಮಾಡಿದ್ದಾರೆ.

‘ಜನ ಸಾಮಾನ್ಯರ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ. ತೊಗಾಡಿಯಾ ಅವರ ಸಿದ್ಧಾಂತವನ್ನು ನಾನು ಒಪ್ಪುವುದಿಲ್ಲ. ಆದರೆ, ನನ್ನ ಬೆಂಬಲ ಯಾವಾಗಲೂ ಅವರಿಗೆ ಇದೆ. ಮೋದಿ ಮತ್ತು ಅಮಿತ್‌ ಶಾ ಯಾವೆಲ್ಲ ರೀತಿಯ ಪಿತೂರಿ ನಡೆಸುತ್ತಾರೆ ಎಂಬುದು ನಮಗೆಲ್ಲಾ ಗೊತ್ತಿದೆ. ಹಿಂದೂಗಳ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ಹಿಂದೂ ಸಂಘಟನೆಯೊಂದರ ನಾಯಕರೊಬ್ಬರು ಈಗ ಖಂಡಿತವಾಗಿಯೂ ಅಪಾಯದಲ್ಲಿದ್ದಾರೆ’ ಎಂದು ಹಾರ್ದಿಕ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.