ಮರಿಯಮ್ಮನಹಳ್ಳಿ (ಬಳ್ಳಾರಿ ಜಿಲ್ಲೆ): ಸಮೀಪದ ರಾಷ್ಟ್ರೀಯ ಹೆದ್ದಾರಿ–13ರ ದೇವಲಾಪುರ ಬಳಿ ಬುಧವಾರ ತಡರಾತ್ರಿ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಐದು ವರ್ಷದ ಗಂಡು ಚಿರತೆಯೊಂದು ಮೃತಪಟ್ಟಿದೆ.
ಮರಿಯಮ್ಮನಹಳ್ಳಿ ಉಪ ವಲಯ ಅರಣ್ಯದ ನಂದಿಬಂಡಿ, ವರದಾಪುರ ಸೇರಿದಂತೆ ಇತರೆ ಗ್ರಾಮಗಳ ಸುತ್ತಮುತ್ತಲ ಅರಣ್ಯ ಪ್ರದೇಶದಲ್ಲಿ ಹಲವು ಚಿರತೆಗಳು ಇವೆ. ರಾತ್ರಿ ಸಮಯದಲ್ಲಿ ಆಹಾರ ಹುಡುಕಿಕೊಂಡು ಹೆದ್ದಾರಿ ದಾಟುತ್ತಿದ್ದ ಸಮಯದಲ್ಲಿ ಅಪಘಾತ ಸಂಭವಿಸಿರಬಹುದು ಎಂದು ಹೊಸಪೇಟೆ ವಲಯ ಅರಣ್ಯಾಧಿಕಾರಿ ನಾಗರಾಜ್ ತಿಳಿಸಿದ್ದಾರೆ.
ಗುಂಡಾ ಪ್ರವಾಸಿ ಮಂದಿರದಲ್ಲಿ ಪಶುವೈದ್ಯರು ಗುರುವಾರ ಬೆಳಿಗ್ಗೆ ಮೃತ ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿದರು. ಡಿಸೆಂಬರ್ ತಿಂಗಳಲ್ಲಿ ಇದೇ ಹೆದ್ದಾರಿಯ ತಿಮ್ಮಲಾಪುರ ಬಳಿ ವಾಹನ ಡಿಕ್ಕಿ ಹೊಡೆದು ಒಂದೂವರೆ ವರ್ಷದ ಗಂಡು ಚಿರತೆ ಮರಿ ಮೃತಪಟ್ಟಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.