ಬೆಂಗಳೂರು: ‘ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ವಿರುದ್ಧ ಅಂತರ್ಜಾಲದಲ್ಲಿ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ’ ಎಂದು ಆರೋಪಿಸಿ ಪಕ್ಷದ ರಾಜ್ಯದ ಮುಖಂಡರು, ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್ ಕುಮಾರ್ ಅವರಿಗೆ ಬುಧವಾರ ದೂರು ಸಲ್ಲಿಸಿದರು.
ಕಮಿಷನರ್ ಕಚೇರಿಗೆ ಬಂದಿದ್ದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ನೇತೃತ್ವದ ನಿಯೋಗ, ‘ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಶಿಕ್ಷಿಸಬೇಕು’ ಎಂದು ಒತ್ತಾಯಿಸಿತು.
‘ನವೆಂಬರ್ 1ರಂದು ಕರ್ನಾಟಕದಲ್ಲಿ ಕನ್ನಡ ಧ್ವಜ ಹಾರಿಸುವ ಬದಲು ಬಿಜೆಪಿ ಧ್ವಜ ಹಾರಿಸುವಂತೆ ಅಮಿತ್ ಶಾ ಕರೆ ನೀಡಿದ್ದಾರೆ ಎಂದು 'mybengalooru.com' ಜಾಲತಾಣದಲ್ಲಿ ಸುಳ್ಳು ಸುದ್ದಿ ಪ್ರಕಟಿಸಲಾಗಿದೆ. ಆ ಸುದ್ದಿಯನ್ನು 'namma nechchina mukhyamantri' ಫೇಸ್ಬುಕ್ ಗ್ರೂಪ್ ಮೂಲಕ ಶೇರ್ ಮಾಡಲಾಗಿದ್ದು, ಇದರಿಂದ ಅಮಿತ್ ಶಾ, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಮನಸ್ಸಿಗೆ ನೋವಾಗಿದೆ’
‘ಚುನಾವಣೆಗಳು ಸಮೀಪಿಸುತ್ತಿರುವುದರಿಂದ ಬಿಜೆಪಿಯ ಬಗ್ಗೆ ಅಪಪ್ರಚಾರ ಮಾಡಲಾತ್ತಿದೆ. ಮುಖ್ಯಮಂತ್ರಿಗಳ ಆಪ್ತರೇ ಸೇರಿಕೊಂಡು ಈ ಜಾಲತಾಣ ಆರಂಭಿಸಿರುವ ಅನುಮಾನವಿದೆ. ಮಾನಹಾನಿ (ಐಪಿಸಿ 499) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಳ್ಳಬೇಕು’ ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ.
ದೂರು ಪಡೆದ ಕಮಿಷನರ್ ಸುನೀಲ್ ಕುಮಾರ್, ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವುದಾಗಿ ಭರವಸೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.