ADVERTISEMENT

ಕಾರ್ಮಿಕರ ಕಲ್ಯಾಣ ನಿಧಿ ಹೆಚ್ಚಳ ಮಸೂದೆಗೆ ಅನುಮೋದನೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2017, 20:08 IST
Last Updated 24 ಮಾರ್ಚ್ 2017, 20:08 IST

ಬೆಂಗಳೂರು: ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ (ತಿದ್ದುಪಡಿ) ಮಸೂದೆಗೆ ವಿಧಾನ ಪರಿಷತ್‌ ಶುಕ್ರವಾರ ಅನುಮೋದನೆ ನೀಡಿತು.

‘ಕಲ್ಯಾಣ ನಿಧಿಗೆ ಇದುವರೆಗೆ ಕಾರ್ಮಿಕರಿಂದ ₹6, ಕಾರ್ಖಾನೆ ಮಾಲೀಕರಿಂದ  ₹12 ಮತ್ತು ಸರ್ಕಾರದಿಂದ ₹6 ವಂತಿಗೆ ಸಂಗ್ರಹಿಸಲಾಗುತಿತ್ತು. ಅದನ್ನು  ಕ್ರಮವಾಗಿ  ₹ 20, ₹ 40 ಮತ್ತು ₹ 20ಕ್ಕೆ ಹಚ್ಚಿಸಲಾಗಿದೆ’ ಎಂದು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ತಿಳಿಸಿದರು.

ಇದರಿಂದ ರಾಜ್ಯದ 33 ಲಕ್ಷ ಕಾರ್ಮಿಕರಿಗೆ ಅನುಕೂಲ ಆಗುತ್ತದೆ. ಅಲ್ಲದೆ, ರಾಜ್ಯ ಸರ್ಕಾರಕ್ಕೆ ₹ 4.62 ಕೋಟಿ ಹೊರೆ ಆಗಲಿದ್ದು, ಆರ್ಥಿಕ ಇಲಾಖೆಯ ಅನುಮೋದನೆ ದೊರೆತಿದೆ ಎಂದು ವಿವರಿಸಿದರು.

ವಯೋಮಿತಿ ಹೆಚ್ಚಳ: ಇತರೆ ವಿಶ್ವವಿದ್ಯಾಲಯಗಳಂತೆ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ನಿವೃತ್ತಿ ವಯಸ್ಸನ್ನೂ 65ರಿಂದ 67ಕ್ಕೆ ಹೆಚ್ಚಿಸುವ ‘ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ (ತಿದ್ದುಪಡಿ) ಮಸೂದೆ’ಗೆ ವಿಧಾನ ಪರಿಷತ್‌ ಒಪ್ಪಿಗೆ ನೀಡಿತು.

ಬಫರ್‌ ವಲಯದಲ್ಲಿ ಮನೆ ಇದ್ದರೆ ಹಕ್ಕುಪತ್ರ: ನಗರ ಪ್ರದೇಶಗಳ ಬಫರ್‌ ವಲಯದ ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡವರಿಗೆ ಹಕ್ಕುಪತ್ರ ನೀಡುವ ಕರ್ನಾಟಕ ಭೂ ಕಂದಾಯ (ಎರಡನೇ ತಿದ್ದುಪಡಿ) ಮಸೂದೆಗೆ ವಿಧಾನ ಪರಿಷತ್ ಅಂಗೀಕಾರ ನೀಡಿತು.

‘ಕರ್ನಾಟಕ ಭೂ ಕಂದಾಯ ನಿಯಮದ ಪ್ರಕಾರ ಗ್ರಾಮಾಂತರ ಮತ್ತು ನಗರ ಪ್ರದೇಶಗಳ ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡವರಿಗೆ ಹಕ್ಕುಪತ್ರ ನೀಡಲು ಅವಕಾಶ ಇದೆ. ಆದರೆ ನಗರಕ್ಕೆ ಹೊಂದಿಕೊಂಡ ಬಫರ್‌ ವಲಯದಲ್ಲಿ ಮನೆ ಕಟ್ಟಿಕೊಂಡವರಿಗೆ ತೊಂದರೆ ಆಗಿತ್ತು. ಅವರಿಗೂ ನಗರ ಪ್ರದೇಶದ ವ್ಯಾಪ್ತಿಯಲ್ಲಿ 30x40 ಅಳತೆಯ ಜಾಗಕ್ಕೆ ಹಕ್ಕುಪತ್ರ ನೀಡಲಾಗುವುದು’ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.