ದಾಬಸ್ಪೇಟೆ: ನೆಲಮಂಗಲ ತಾಲ್ಲೂಕು ಹಳೇ ನಿಜಗಲ್ ಗ್ರಾಮದಲ್ಲಿ ಇತ್ತೀಚೆಗೆ ‘ವನಭೋಜನ’ ಕಾರ್ಯಕ್ರಮ ನಡೆಯಿತು.
ಇದು ಗ್ರಾಮದ ವಿಶಿಷ್ಟ ಆಚರಣೆ ಆಗಿದೆ. ಬೆಳಿಗ್ಗೆ ಜನ ಹೊಲಗಳಿಗೆ ಬಂದು ಮಣ್ಣಿನಿಂದ ದೇವರ ಮೂರ್ತಿಯನ್ನು ತಯಾರಿಸುತ್ತಾರೆ. ಆದರೆ, ಅದನ್ನು ಪೂರ್ಣಗೊಳಿಸದೆ ಅರ್ಧಕ್ಕೆ ಬಿಡುತ್ತಾರೆ. ಸಂಜೆ 4 ಗಂಟೆಗೆ ಬಂದು ಮೂರ್ತಿಯನ್ನು ಪೂರ್ಣಗೊಳಿಸುತ್ತಾರೆ. ಅದಕ್ಕೆ ಹೊಸ ಸೀರೆ, ಆಭರಣಗಳಿಂದ ಅಲಂಕಾರ ಮಾಡುತ್ತಾರೆ.
ಗ್ರಾಮಸ್ಥರು ವಾದ್ಯ ಮೇಳಗಳೊಂದಿಗೆ ಕಳಶ, ಆರತಿ ಹೊತ್ತು ಮೆರವಣಿಗೆ ಮೂಲಕ ಇಲ್ಲಿಗೆ ಬರುತ್ತಾರೆ. ಬಳಿಕ ಪೂಜೆ ನೆರವೇರಿಸಲಾಗುತ್ತದೆ.
‘ಈ ಹಿಂದೆ ಊರಿನಲ್ಲಿ ವಿಚಿತ್ರ ಕಾಯಿಲೆಯಿಂದ ಜನ, ಜಾನುವಾರುಗಳು ಮೃತಪಟ್ಟಿದ್ದವು. ಇದರ ಪರಿಹಾರಕ್ಕಾಗಿ ಗ್ರಾಮಸ್ಥರು ಒಂದು ದಿನ ಮನೆಗಳನ್ನು ಬಿಟ್ಟು ಹೊಲದಲ್ಲಿ ಬಿಡಾರ ಹೂಡುತ್ತಾರೆ. ಅಲ್ಲಿಯೇ ವಿಶೇಷ ಅಡುಗೆ ತಯಾರಿಸಿ ದಿನ ಕಳೆಯುತ್ತಾರೆ. ಇದನ್ನು ವನಭೋಜನ ಎಂದು ಕರೆಯುತ್ತಾರೆ. ಇದರಿಂದ ಗ್ರಹಣದೋಷ, ರೋಗರುಜಿನಗಳು ಬರುವುದಿಲ್ಲ’ ಎಂದು ಗ್ರಾಮದ ವ್ಯಕ್ತಿಯೊಬ್ಬರು ತಿಳಿಸಿದರು.
‘ಈ ಆಚರಣೆ 13 ವರ್ಷಗಳ ಹಿಂದೆ ನಿಂತು ಹೋಗಿತ್ತು. ಈಗ ಮತ್ತೆ ಆರಂಭವಾಗಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.