ಬೆಂಗಳೂರು: ಗೃಹ ಸಚಿವರನ್ನು ಬದಲಿಸಲಾಗುತ್ತದೆ ಎಂಬುದು ಸತ್ಯಕ್ಕೆ ದೂರವಾದ ಸಂಗತಿ. ತಮ್ಮ ಸರ್ಕಾರ ಇರುವವರೆಗೂ ಕೆ.ಜೆ.ಜಾರ್ಜ್ ಅವರೇ ಗೃಹ ಸಚಿವರಾಗಿ ಇರುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ವಿಧಾನಸೌಧದಲ್ಲಿ ಬುಧವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು, ‘ಜಾರ್ಜ್ ಅವರು ಸಮರ್ಥವಾಗಿ ಇಲಾಖೆಯನ್ನು ನಿರ್ವಹಣೆ ಮಾಡುತ್ತಿದ್ದಾರೆ. ಅವರನ್ನು ಬದಲಾವಣೆ ಮಾಡುವ ಪ್ರಸ್ತಾವವೇ ಇಲ್ಲ. ಇದು ವದಂತಿಯಷ್ಟೆ’ ಎಂದರು.
ಹೋಂಡಾ ಹೊರ ಹೋಗುವುದಿಲ್ಲ: ಹೋಂಡಾ ಕಂಪನಿ ಹುಬ್ಬಳ್ಳಿಯಲ್ಲಿ ದ್ವಿಚಕ್ರ ವಾಹನ ತಯಾರಿಕಾ ಘಟಕ ಸ್ಥಾಪಿಸಲು ಅಗತ್ಯವಿರುವ ಎಲ್ಲ ರೀತಿಯ ನೆರವನ್ನು ಸರ್ಕಾರ ನೀಡಲಿದೆ. ಹೋಂಡಾ ಕಂಪೆನಿ ರಾಜ್ಯದಿಂದ ಹೊರ ಹೋಗುವುದಿಲ್ಲ. ಹುಬ್ಬಳ್ಳಿಯಲ್ಲೇ ಘಟಕ ಸ್ಥಾಪಿಸಲಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಕಂಪೆನಿಗೆ ನೂರು ಎಕರೆ ಜಮೀನನ್ನು ಈಗಾಗಲೇ ಹಂಚಿಕೆ ಮಾಡಲಾಗಿದೆ. ನೀರು, ಮೂಲಸೌಕರ್ಯ ಒದಗಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದರು. ಕಂಪೆನಿಯು ವಿವಿಧ ರೀತಿಯ ತೆರಿಗೆಗಳ ವಿನಾಯ್ತಿ ನೀಡುವಂತೆ ಬೇಡಿಕೆ ಸಲ್ಲಿಸಿದೆ. ಈ ತಿಂಗಳ ಅಂತ್ಯದೊಳಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಕಂಪೆನಿಯ ಪ್ರತಿನಿಧಿಗಳು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬುನಾಯ್ಡು ಅವರನ್ನು ಭೇಟಿ ಮಾಡಿರುವ ಸಂಗತಿ ಗಮನಕ್ಕೆ ಬಂದಿದೆ. ಆದರೆ ಅವರು ಕರ್ನಾಟಕದಲ್ಲಿ ಘಟಕ ಸ್ಥಾಪನೆಯಿಂದ ಹಿಂದೆ ಸರಿಯುವುದಿಲ್ಲ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.