ADVERTISEMENT

ದಲಿತರ ಕೇರಿ ರಸ್ತೆಗೆ ಮುಳ್ಳು ಬೇಲಿ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2017, 19:51 IST
Last Updated 19 ಸೆಪ್ಟೆಂಬರ್ 2017, 19:51 IST
ಹಿರಿಯೂರು ತಾಲ್ಲೂಕಿನ ಚಿಗಳಿಕಟ್ಟೆ ಗ್ರಾಮದ ದಲಿತ ಕಾಲೊನಿಗೆ ಆದಿಜಾಂಬವ ಮಠದ ಮಾರ್ಕಾಂಡ ಮುನಿ ಸ್ವಾಮೀಜಿ ಹಾಗೂ ಷಡಕ್ಷರಮುನಿ ಸ್ವಾಮೀಜಿ ಭೇಟಿ ನೀಡಿ ಪರಿಶೀಲಿಸಿದರು.
ಹಿರಿಯೂರು ತಾಲ್ಲೂಕಿನ ಚಿಗಳಿಕಟ್ಟೆ ಗ್ರಾಮದ ದಲಿತ ಕಾಲೊನಿಗೆ ಆದಿಜಾಂಬವ ಮಠದ ಮಾರ್ಕಾಂಡ ಮುನಿ ಸ್ವಾಮೀಜಿ ಹಾಗೂ ಷಡಕ್ಷರಮುನಿ ಸ್ವಾಮೀಜಿ ಭೇಟಿ ನೀಡಿ ಪರಿಶೀಲಿಸಿದರು.   

ಹಿರಿಯೂರು: ತಾಲ್ಲೂಕಿನ ಚಿಗಳಿಕಟ್ಟೆ ಗ್ರಾಮದಲ್ಲಿ ದಲಿತ ಕಾಲೊನಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಮೇಲ್ಜಾತಿಯ ವ್ಯಕ್ತಿಯೊಬ್ಬ ಮುಳ್ಳು ಬೇಲಿ ಹಾಕಿ ಸಂಚಾರಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಆದಿಜಾಂಬವ ಮಠದ ಮಾರ್ಕಾಂಡ ಮುನಿ ಸ್ವಾಮೀಜಿ ಹಾಗೂ ಷಡಕ್ಷರಮುನಿ ಸ್ವಾಮೀಜಿ ಮಂಗಳವಾರ ಸಂಜೆ ಭೇಟಿ ನೀಡಿ ದಲಿತರೊಂದಿಗೆ ಚರ್ಚಿಸಿದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಷಡಕ್ಷರಮುನಿ ಸ್ವಾಮೀಜಿ, ‘ದಲಿತರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿರುವುದು ಖಂಡನೀಯ. ದಲಿತರಿಗೆ ಮನೆಗೆ ಹೋಗಲು ಹಾದಿ ಬಿಡುವುದಿಲ್ಲ ಎನ್ನುವುದಾದರೆ ನಾವು ಇನ್ನೂ ಯಾವ ಕಾಲದಲ್ಲಿ ಬದುಕುತ್ತಿದ್ದೇವೆ ಎಂಬ ಪ್ರಶ್ನೆ ಎದುರಾಗುತ್ತದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ವೈಯಕ್ತಿಕ ದ್ವೇಷ, ಅಸೂಯೆಯಿಂದ ಜಾತಿ–ಜಾತಿಗಳ ನಡುವೆ ದ್ವೇಷದ ವಿಷ ಬೀಜ ಬಿತ್ತುವುದು, ಸಾರ್ವಜನಿಕ ನೆಮ್ಮದಿ ಹಾಳು ಮಾಡುವುದು ಸರಿಯಲ್ಲ. ಮಾದಿಗ ಸಮಾಜದ ಜನರು ಹಿಂದಿನಿಂದಲೂ ತಮ್ಮ ಕಾಲೊನಿಗೆ ಹೋಗಲು ಇದೇ ರಸ್ತೆಯನ್ನು ಬಳಸುತ್ತಿದ್ದರು. ಈಗ ಮುಳ್ಳು ಬೇಲಿ ಹಾಕಿ ಅಡ್ಡಿ ಮಾಡುತ್ತಿರುವುದು ಯಾವ ಸಂಸ್ಕೃತಿಯನ್ನು ತೋರಿಸುತ್ತದೆ’ ಎಂದು ಸ್ವಾಮೀಜಿ ಪ್ರಶ್ನಿಸಿದರು.

ADVERTISEMENT

ಸಂಘರ್ಷ ಬೇಡ

‘ಇಂತಹ ಸಮಸ್ಯೆಗಳನ್ನು ಪರಸ್ಪರ ಕುಳಿತು ಚರ್ಚಿಸಿ ಬಗೆಹರಿಸಿಕೊಳ್ಳೋಣ. ಸಂಘರ್ಷಕ್ಕೆ ಅವಕಾಶ ಮಾಡಿಕೊಡಬೇಡಿ. ಸಂಬಂಧಿಸಿದ ವ್ಯಕ್ತಿಗೆ ತಿಳಿಹೇಳೋಣ. ಒಪ್ಪದಿದ್ದರೆ ಕಾನೂನಿನ ನೆರವು ಪಡೆಯೋಣ’ ಎಂದು ಷಡಕ್ಷರಮುನಿ ಸ್ವಾಮೀಜಿ ಮಾದಿಗ ಸಮಾಜದವರಿಗೆ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.