ADVERTISEMENT

ನಗರ ನೀರು ಪೂರೈಕೆ ಯೋಜನೆ ಆಧುನೀಕರಣ: ವಿಶ್ವಬ್ಯಾಂಕ್‌ ನೆರವು

​ಪ್ರಜಾವಾಣಿ ವಾರ್ತೆ
Published 24 ಮೇ 2016, 19:30 IST
Last Updated 24 ಮೇ 2016, 19:30 IST

ನವದೆಹಲಿ: ಕರ್ನಾಟಕ ನಗರ ನೀರು ಪೂರೈಕೆ ಆಧುನೀಕರಣ ಯೋಜನೆಗೆ ವಿಶ್ವಬ್ಯಾಂಕಿನಿಂದ ₹ 677 ಕೋಟಿ (ಹತ್ತು ಕೋಟಿ ಡಾಲರ್‌) ಸಾಲ ಪಡೆಯುವ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಮಂಗಳವಾರ ಸಹಿ ಹಾಕಿತು.

ಹಣಕಾಸು ಸಚಿವಾಲಯದ ಜಂಟಿ ಕಾರ್ಯದರ್ಶಿ ರಾಜ್‌ಕುಮಾರ್‌ ಹಾಗೂ ಭಾರತದಲ್ಲಿನ ವಿಶ್ವಬ್ಯಾಂಕ್‌ ಹಂಗಾಮಿ ಅಧಿಕಾರಿ ಮೈಕೇಲ್‌ ಹ್ಯಾನಿ ಸಾಲ ಒಪ್ಪಂದಕ್ಕೆ ಸಹಿ ಹಾಕಿದರು.

ಯೋಜನೆ ಹುಬ್ಬಳ್ಳಿ– ಧಾರವಾಡ ಸೇರಿದಂತೆ ಕರ್ನಾಟಕದ ವಿವಿಧ ನಗರಗಳಿಗೆ ನಿರಂತರ ಕೊಳವೆ ನೀರು ಪೂರೈಸುವ ಹಾಗೂ ವಿತರಣೆ ವ್ಯವಸ್ಥೆ ಬಲಪಡಿಸುವ ಉದ್ದೇಶ ಹೊಂದಿದ್ದು, ಕರ್ನಾಟಕ ನಗರ ಮೂಲಸೌಲಭ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ಜಾರಿ ಹೊಣೆ ಹೊತ್ತಿದೆ ಎಂದು ಹಣಕಾಸು ಸಚಿವಾಲಯದ ಅಧಿಕೃತ ಪ್ರಕಟಣೆ ತಿಳಿಸಿದೆ.

ಆರು ವರ್ಷದಲ್ಲಿ ಜಾರಿಯಾಗುವ ನಗರ ನೀರು ಪೂರೈಕೆ ಆಧುನಿಕರಣ ಯೋಜನೆ ಆರಂಭದಲ್ಲಿ ಹುಬ್ಬಳ್ಳಿ– ಧಾರವಾಡದಲ್ಲಿ ಜಾರಿಯಾಗಲಿದ್ದು, ಅನಂತರದ ವರ್ಷಗಳಲ್ಲಿ ಉಳಿದ ನಗರಗಳಿಗೆ ವಿಸ್ತರಣೆ ಆಗಲಿದೆ.

ಹುಬ್ಬಳ್ಳಿ– ಧಾರವಾಡ ಮಹಾನಗರಪಾಲಿಕೆ ನೀರು ಪೂರೈಕೆ ಹೊಣೆಗಾರಿಕೆ ನಿರ್ವಹಿಸಲು ಪ್ರತ್ಯೇಕ ಸಂಸ್ಥೆಯನ್ನು ಸ್ಥಾಪಿಸಲಿದ್ದು, ಒಪ್ಪಂದದ ಅವಧಿ ಮುಗಿಯುವ ಅಂತ್ಯದಲ್ಲಿ ನೀರು ಪೂರೈಕೆ ಜವಾಬ್ದಾರಿಯನ್ನು ವೃತ್ತಿಪರ ನಿರ್ವಹಣಾ ಸಂಸ್ಥೆಯಿಂದ ವಹಿಸಿಕೊಳ್ಳಲಿದೆ.

ವಿಶ್ವಬ್ಯಾಂಕ್‌ ಸಾಲ ನೆರವಿನ ಯೋಜನೆಯಿಂದ 1.60 ಲಕ್ಷ ಕೊಳಚೆ ಪ್ರದೇಶದ ನಿವಾಸಿಗಳೂ ಸೇರಿದಂತೆ ಅವಳಿ ನಗರದ ಹತ್ತು ಲಕ್ಷ ಜನರಿಗೆ ಅನುಕೂಲವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.