ಬೆಂಗಳೂರು: ‘ನಮ್ಮ ಮೆಟ್ರೊ’ ದಲ್ಲಿ ಅನವಶ್ಯಕವಾಗಿ ಹಿಂದಿ ಭಾಷೆ ಬಳಕೆಯನ್ನು ವಿರೋಧಿಸಿ ಮಂಗಳವಾರ #nammametrohindibeda (ನಮ್ಮಮೆಟ್ರೊಹಿಂದಿಬೇಡ), #nammametrokannadasaaku (ನಮ್ಮಮೆಟ್ರೊಕನ್ನಡಸಾಕು) ಟ್ವಿಟರ್ ಅಭಿಯಾನ ನಡೆದಿದೆ.
ಬಸವನ ಗುಡಿ ಸೇರಿದಂತೆ ಹಲವು ಮೆಟ್ರೊ ನಿಲ್ದಾಣಗಳ ಸೂಚನಾ ಫಲಕ ಅಥವಾ ನಾಮ ಫಲಕಗಳಲ್ಲಿ ಹಿಂದಿಗೆ ಎರಡನೇ ಸ್ಥಾನ ಕಲ್ಪಿಸಲಾಗಿದೆ. ಈ ಹಿಂದೆ ಹಿಂದಿ ಭಾಷೆಗೆ ಮೂರನೇ ಸ್ಥಾನ ನೀಡಲಾಗಿತ್ತು.
ಇದು ಹೀಗೆಯೇ ಮುಂದುವರಿದರೆ ಕೇಂದ್ರ ಸರ್ಕಾರ ಮುಂದೊಂದು ದಿನ ಕನ್ನಡವನ್ನೇ ಮಾಯವಾಗಿಸಿ ಹಿಂದಿ ಭಾಷೆಗೆ ಮೊದಲ ಸ್ಥಾನ ನೀಡಬಹುದು ಎಂದು ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ.
ಹಿಂದಿ ಹೇರಿಕೆಯ ವಿರುದ್ಧ ದನಿ ಎತ್ತಲು ಹಾಗು ಸಮಾನ ಭಾಷಾ ನೀತಿಗಾಗಿ ಆಗ್ರಹಿಸಿ ಈ ಹೋರಾಟವನ್ನು ಬೆಂಬಲಿಸುವಂತೆ ಟ್ವಿಟರ್ ಅಭಿಯಾನ ನಡೆಸುತ್ತಿರುವ ಬನವಾಸಿ ಬಳಗ ಮನವಿ ಮಾಡಿದೆ.
ನಮ್ಮ ಮೆಟ್ರೊ ನಮ್ಮದಾಗೇ ಉಳಿಯಬೇಕು ಎಂದರೆ ಅಲ್ಲಿ ಅನವಶ್ಯಕ ಹಿಂದಿ ಹೇರಿಕೆ ನಿಲ್ಲಬೇಕು. ಹಿಂದಿ ಹೇರಿಕೆಯ ಪ್ರಮಾಣ ತಗ್ಗಿದೆ, ಆದರೆ ನಿಂತಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳ, ಮೆಟ್ರೊ ಅಧಿಕಾರಿಗಳ ಗಮನ ಸೆಳೆದು, ಬೆಂಗಳೂರಿನ ಮೆಟ್ರೊದಲ್ಲಿ ಕನ್ನಡ ಸಾರ್ವಭೌಮತ್ವ ಎತ್ತಿ ಹಿಡಿಯಲು ಒತ್ತಾಯಿಸಿ ಈ ಟ್ವಿಟರ್ ಅಭಿಯಾನ ಆಯೋಜಿಸಲಾಗಿದೆ ಎಂದು ಬನವಾಸಿ ಬಳಗ ತನ್ನ ಫೇಸ್ಬುಕ್ ಪುಟದಲ್ಲಿ ಬರೆದುಕೊಂಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.