ADVERTISEMENT

ನಾಟಕಗಳಲ್ಲಿ ಸಿನಿಮಾ ಅನುಕರಣೆ

ನಾಸಿರುದ್ದೀನ್ ಷಾ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 13 ಜನವರಿ 2015, 19:34 IST
Last Updated 13 ಜನವರಿ 2015, 19:34 IST
ನಾಟಕಗಳಲ್ಲಿ ಸಿನಿಮಾ ಅನುಕರಣೆ
ನಾಟಕಗಳಲ್ಲಿ ಸಿನಿಮಾ ಅನುಕರಣೆ   

ಮೈಸೂರು: ಆಧುನಿಕ ತಂತ್ರಜ್ಞಾನದ ಮೇಲಿನ ಅತಿ­ಯಾದ ಅವಲಂಬನೆಯಿಂದಾಗಿ ನಾಟಕಗಳೂ ಸಿನಿಮಾದಂತೆಯೇ ಆಗುತ್ತಿವೆ. ಇದು ದುರಂತ. ನಾಟಕಗಳು ರಂಗಪ್ರಯೋಗಗಳಾಗಿಯೇ ಉಳಿಯ ಬೇಕು ಎಂದು ರಂಗಭೂಮಿ ಮತ್ತು ಬಾಲಿವುಡ್ ನಟ ನಾಸಿರುದ್ದೀನ್ ಷಾ ಹೇಳಿದರು.

ರಂಗಾಯಣದಲ್ಲಿ ಮಂಗಳವಾರ ಸಂಜೆ  ಷೇಕ್ಸ್‌ ಪಿಯರ್ ನೆನಪಿನ ರಾಷ್ಟ್ರೀಯ ನಾಟಕೋತ್ಸವ ‘ಬಹುರೂಪಿ’ಯ ಉದ್ಘಾಟನೆಗೂ ಮುನ್ನ ನಡೆದ ಮಾಧ್ಯಮ ಸಂವಾದದಲ್ಲಿ ಅವರು ಮಾತನಾಡಿದರು.

‘ಡಿಜಿಟಲ್, ಗ್ರಾಫಿಕ್ ತಂತ್ರಜ್ಞಾನ ಬಳಕೆಯಿಂದ ರಂಗಭೂಮಿಯೂ ಇವತ್ತು ಸರ್ಕಸ್, ಜಾದು ಪ್ರದರ್ಶನ, ಸಿನಿಮಾಗಳಂತೆ ಭಾಸವಾಗುತ್ತಿವೆ.  ಅದರಲ್ಲಿರುವ ಮೂಲಸೆಲೆ, ಕಲೆಯ ಗೌರವ ಉಳಿ  ಯಬೇಕು. ತಂತ್ರಜ್ಞಾನದ ಅತಿ ಬಳಕೆಯಿಂದಾಗಿ ಯೂರೋಪ್ ಮತ್ತು ಅಮೆರಿಕದಲ್ಲಿ ರಂಗ ಭೂಮಿಯು ದಿಕ್ಕು ತಪ್ಪುತ್ತಿದೆ. ಸಿನಿಮಾಗಳನ್ನು ಅನುಕ ರಿಸುವ ಮೂಲಕ ಅಸ್ತಿತ್ವ ಕಳೆದುಕೊಳ್ಳುವ ಭೀತಿ ಎದುರಿಸುತ್ತಿವೆ’ ಎಂದರು.

ಭಾರತೀಯ ಸಿನಿಮಾದ ಕುರಿತು ಮಾತನಾಡಿದ ಅವರು, ‘ಇತ್ತೀಚೆಗೆ ಭಾರತೀಯ ಸಿನಿಮಾದ ಶತಮಾ­ನೋತ್ಸ­ವ­ವನ್ನು ಆಚರಿಸಲಾಯಿತು. ಆದರೆ, ಇದು ಅರ್ಥಹೀನವಾದ ಆಚರಣೆ. 1930ರಲ್ಲಿ ಫಾರ್ಸಿ ರಂಗಭೂಮಿ­ಯಿಂದ ಪ್ರಭಾವಿತವಾದ ಹಿಂದಿ ಚಿತ್ರರಂಗ ಇವತ್ತಿಗೂ ಅದೇ ಧಾಟಿಯ ಚಿತ್ರಗಳನ್ನು ತಯಾರಿಸುತ್ತಿದೆ. ಹೊಸ ರೀತಿಯ ಚಲನಚಿತ್ರದ ಅವತಾರವೇ ಆಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ರಂಗಾಯಣದ ಸಂಸ್ಥಾಪಕ ಬಿ.ವಿ. ಕಾರಂತರ ಕತೃತ್ವ ಶಕ್ತಿ, ಸ್ನೇಹಪರತೆ, ರಂಗಭೂಮಿಗಾಗಿ ಇದ್ದ ಬದ್ಧತೆ ಅದ್ಭುತವಾದುದು. ಅವರ ನೈಜತೆ, ಉದಾರತೆ, ದೂರದೃಷ್ಟಿಯ ಸ್ವಭಾವಗಳು ಅನುಕರಣೀಯ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.