ADVERTISEMENT

ನೀರಿಗಿಳಿದು ಪ್ರತಿಭಟಿಸಿದ ಕಾರವಾರ ನಗರಸಭೆ ಸದಸ್ಯ

​ಪ್ರಜಾವಾಣಿ ವಾರ್ತೆ
Published 29 ಜೂನ್ 2016, 20:19 IST
Last Updated 29 ಜೂನ್ 2016, 20:19 IST

ಕಾರವಾರ: ಇಲ್ಲಿನ ಬಾಡದ ಗುರುಮಠ ಬಳಿಯ ಮನೆ ಮುಂಭಾಗ ಕೆರೆಯಂತಾಗಿದ್ದು ನೀರು ಹರಿದು ಹೋಗಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ, ನಗರಸಭೆ ನಾಮನಿರ್ದೇಶಿತ ಸದಸ್ಯ ಸಂತೋಷ ಗುರುಮಠ ಅವರು ಅದೇ ನೀರಿಗಿಳಿದು ಪ್ರತಿಭಟನೆ ನಡೆಸಿದರು.

‘ಮಳೆ ನೀರು ಹರಿದು ಹೋಗುತ್ತಿದ್ದ ಜಮೀನಿನಲ್ಲಿ ಕೆಲವರು ಅನಧಿಕೃತವಾಗಿ ಮನೆ ನಿರ್ಮಿಸಿದ್ದು,ನೀರು ಹೋಗದಂತೆ ತಡೆ ಮಾಡಿದ್ದಾರೆ. ಇದರಿಂದ ನಮ್ಮ ಮನೆ ಮುಂಭಾಗ 5 ಅಡಿ ಆಳದಷ್ಟು ನೀರು ತುಂಬಿಕೊಂಡಿದೆ ಎಂದು ಸಂತೋಷ್‌  ‘ಪ್ರಜಾವಾಣಿ’ಗೆ ತಿಳಿಸಿದರು.

‘ನೀರಿನ ಹರಿವಿಗೆ ತಡೆಯಾಗಿದ್ದ ಖಾಲಿ ನಿವೇಶನದ ಕಂಪೌಂಡ್‌ ತೆರವುಗೊಳಿಸಲು  ಪೌರಕಾರ್ಮಿಕರು ತೆರಳಿದ್ದರು. ಪಕ್ಕದ ಮನೆ ಮಾಲೀಕ ಸೂರಜ್‌ ಕೊಠಾರಕರ ಕಾರ್ಮಿಕರನ್ನು ನಿಂದಿಸಿ, ಹಲ್ಲೆಗೆ ಮುಂದಾದರು. ಅಲ್ಲದೇ   ತಮ್ಮ ಸಹೋದರಿ ಸುನಂದಾ ಅವರ ಮೂಲಕ ನನ್ನ ಮೇಲೆ ಸುಳ್ಳು ದೂರು ದಾಖಲಿಸಿದ್ದಾರೆ’ ಎಂದರು.

‘ನಮ್ಮ ಮನೆಯ ಪಕ್ಕದ ಕಂಪೌಂಡ್‌ ತೆರವುಗೊಳಿಸಲು ಸಂತೋಷ್‌, ಪೌರಕಾರ್ಮಿಕರ ಜತೆ ಬಂದಿದ್ದರು. ಅದನ್ನು ಒಡೆಯುವುದರಿಂದ ಮಳೆ ನೀರು  ರಸ್ತೆ ಆವರಿಸಿ ತೊಂದರೆಯಾಗುತ್ತದೆ. ಅದಕ್ಕಾಗಿ ಬೇಡ ಎಂದೆವು. ಆದರೆ  ಅದನ್ನು ಒಡೆದರು. ಹೀಗಾಗಿ ಸಂತೋಷ್‌ ವಿರುದ್ಧ  ದೂರು ದಾಖಲಿಸಿದ್ದೇವೆ’ ಎಂದು ಸುನಂದಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.