ADVERTISEMENT

‘ಪದ್ಮಾವತಿ’ ಚಿತ್ರ ನಿಷೇಧಕ್ಕೆ ಒತ್ತಾಯಿಸಿ ತಲವಾರ ಹಿಡಿದು ರಜಪೂತರ ಮೆರವಣಿಗೆ: 8 ಜನರ ಬಂಧನ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2017, 11:57 IST
Last Updated 23 ನವೆಂಬರ್ 2017, 11:57 IST
ಕಲಬುರ್ಗಿಯಲ್ಲಿ ರಜಪೂತ ಸಮಾಜದವರು ‘ಪದ್ಮಾವತಿ’ ಚಲನಚಿತ್ರವನ್ನು ನಿಷೇಧಿಸುವಂತೆ ಒತ್ತಾಯಿಸಿ ಬುಧವಾರ ಪ್ರತಿಭಟನೆ ನಡೆಸಿ ಚಿತ್ರದ ನಿರ್ದೇಶಕರ ಪ್ರತಿಕೃತಿ ದಹಿಸಿದಾಗಿನ ಚಿತ್ರ
ಕಲಬುರ್ಗಿಯಲ್ಲಿ ರಜಪೂತ ಸಮಾಜದವರು ‘ಪದ್ಮಾವತಿ’ ಚಲನಚಿತ್ರವನ್ನು ನಿಷೇಧಿಸುವಂತೆ ಒತ್ತಾಯಿಸಿ ಬುಧವಾರ ಪ್ರತಿಭಟನೆ ನಡೆಸಿ ಚಿತ್ರದ ನಿರ್ದೇಶಕರ ಪ್ರತಿಕೃತಿ ದಹಿಸಿದಾಗಿನ ಚಿತ್ರ   

ಕಲಬುರ್ಗಿ: ‘ಪದ್ಮಾವತಿ’ ಚಲನಚಿತ್ರ ಬಿಡುಗಡೆ ವಿರೋಧಿಸಿ ತಲವಾರ ಹಿಡಿದುಕೊಂಡು ಇಲ್ಲಿ ಪ್ರತಿಭಟನೆ ನಡೆಸಿದ್ದ ರಜಪೂತ ಸಮಾಜದ ಎಂಟು ಜನರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಕರ್ತವ್ಯಲೋಪ ಆರೋಪದ ಮೇರೆಗೆ ಇಬ್ಬರು ಸಹಾಯಕ ಸಬ್‌ಇನ್‌ಸೆಕ್ಟರ್‌ (ಎ.ಎಸ್‌.ಐ)ಗಳನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
‘ನಂದಕಿಶೋರ್‌ ಚವಾಣ್‌, ಕರಣ್‌ಸಿಂಗ್‌ ಗೆಹವಾರ್‌, ಕಾರ್ತಿಕ್‌ಸಿಂಗ್‌ ಬಿಯಾಸ್‌, ನರೇಶ್‌ ದುಬೆ, ಆಕಾಶ್‌ ಸಿಂಗ್‌ ಗೆಹವಾರ್‌, ಕರಣ್‌ಸಿಂಗ್‌ ಹಜಾರೆ, ಗೌರವ ಠಾಕೂರ್‌, ಆಕಾಶ ಠಾಕೂರ’ ಬಂಧಿತ ಆರೋಪಿಗಳು.

‘ಅನುಮತಿ ಪಡೆಯದೆ ಇವರು ಬುಧವಾರ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಕೃತಿ ದಹಿಸಿದ್ದಾರೆ. ಕಾನೂನು ಬಾಹಿರವಾಗಿ ಸಾರ್ವಜನಿಕವಾಗಿ ಮಾರಕಾಸ್ತ್ರಗಳನ್ನು ಪ್ರದರ್ಶಿಸಿ, ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸಿರುವುದರಿಂದ ಅವರ ವಿರುದ್ಧ ಸ್ವಯಂ ಪ್ರಕರಣ ದಾಖಲಿಸಿಕೊಂಡು ಎಂಟು ಜನರನ್ನು ಬಂಧಿಸಲಾಗಿದೆ. ಅವರಿಂದ ಮಾರಕಾಸ್ತ್ರ ವಶಪಡಿಸಿಕೊಳ್ಳಲಾಗಿದೆ’ ಎಂದು ಪೊಲೀಸ್‌್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ADVERTISEMENT

‘ಕರ್ತವ್ಯಲೋಪವೆಸಗಿದ ಇಬ್ಬರು ಎಎಸ್‌ಐಗಳನ್ನು ಅಮಾನತುಗೊಳಿಸಲಾಗಿದೆ. ನಗರದ ಚೌಕ್‌, ಬ್ರಹ್ಮಪುರ ಮತ್ತು ಸ್ಟೇಷನ್‌ ಬಜಾರ್‌ ಠಾಣೆಗಳ ಇನ್‌ಸ್ಪೆಕ್ಟರ್‌ಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ಮಾಹಿತಿ ನೀಡಿದ್ದಾರೆ.

ಪ್ರತಿಭಟನಾಕಾರರು ಮಾರಕಾಸ್ತ್ರಗಳನ್ನು ಹಿಡಿದು ಸಾರ್ವಜನಿಕರಲ್ಲಿ ಭಯದ ವಾತಾವರಣ ಉಂಟು ಮಾಡಿದರೆ ಅವರ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.