ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು 2012–13ನೇ ಶೈಕ್ಷಣಿಕ ವರ್ಷದಿಂದ ಈವರೆಗೆ ವಿತರಿಸಿದ ಎಲ್ಲ ಅಂಕಪಟ್ಟಿಗಳನ್ನು ಪರಿಶೀಲಿಸಲು 12 ಪ್ರಾಧ್ಯಾಪಕರ ಸಮಿತಿಯೊಂದನ್ನು ರಚಿಸಿದೆ.
ನಕಲಿ ಅಂಕಪಟ್ಟಿ ಜಾಲದ ತನಿಖೆಯನ್ನು ನಗರ ಅಪರಾಧ ಪತ್ತೆದಳದ (ಸಿಸಿಬಿ) ಪೊಲೀಸರು ಚುರುಕುಗೊಳಿಸಿರುವ ಬೆನ್ನಲ್ಲೇ ಅಸ್ತಿತ್ವಕ್ಕೆ ಬಂದಿರುವ ಸಮಿತಿ ಗುರುವಾರದಿಂದ ಕೆಲಸ ಆರಂಭಿಸಿದೆ.
ಅಂಕಪಟ್ಟಿ ಮುದ್ರಣಕ್ಕೆ ಮುಂಬೈನ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಮ್ಯಾನೇಜ್ಮೆಂಟ್ (ಐಇಎಂ) ಕಂಪೆನಿಗೆ ಹೊರ ಗುತ್ತಿಗೆ ನೀಡಲಾಗಿತ್ತು.
ಮುದ್ರಣ ಹಾಗೂ ತಾಂತ್ರಿಕ ದೋಷದಿಂದ ರದ್ದಾಗಿರುವ 60ರಿಂದ 70 ಸಾವಿರ ಅಂಕಪಟ್ಟಿಗಳನ್ನು ಕಂಪೆನಿಯಿಂದ ವಿಶ್ವವಿದ್ಯಾನಿಲಯ ವಶಕ್ಕೆ ಪಡೆದಿದೆ.
ಮುದ್ರಣಗೊಂಡಿರುವ, ದಾಸ್ತಾನಿನಲ್ಲಿರುವ, ರದ್ದುಪಡಿಸಿದ, ವಿತರಣೆ ಮಾಡಿದ ಅಂಕಪಟ್ಟಿಗಳನ್ನು ಸಮಿತಿ ಪರಿಶೀಲಿಸಲಿದೆ. ಇನ್ಹೌಸ್ ಹಾಗೂ ಖಾಸಗಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ಪ್ರಾರಂಭಿಸಿದ ಕೋರ್ಸ್ಗಳಿಗೆ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳ ಮಾಹಿತಿ ಮತ್ತು ನೋಂದಣಿ ಸಂಖ್ಯೆಯನ್ನು ಹೋಲಿಕೆ ಮಾಡಿ ನೋಡಲಿದೆ. 15ರಿಂದ 20 ದಿನಗಳಲ್ಲಿ ಈ ಕಾರ್ಯವನ್ನು ಪೂರ್ಣಗೊಳಿಸಲು ಸಮಿತಿ ನಿರ್ಧರಿಸಿದೆ.
ವಿಚಾರಣೆ ಎದುರಿಸಿದ ಪರೀಕ್ಷಾಂಗ ವಿಭಾಗದ ಸಹಾಯಕ ಕುಲಸಚಿವ ಸಿದ್ಧರಾಜು ‘ಐಇಎಂ’ ಕಂಪೆನಿಯ ಮುಖ್ಯಸ್ಥ ವೇಣು ಹಾಗೂ ವಿಶ್ವವಿದ್ಯಾಲಯದ ಹಂಗಾಮಿ ನೌಕರ ಶಿವಣ್ಣ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.