ತುಮಕೂರು: ವಿಚಾರಣೆಗೆ ಕರೆತಂದಿದ್ದ ಆರೋಪಿ ಮಹಮ್ಮದ್ ಅಫ್ತಾ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ದಿವ್ಯಾ ಗೋಪಿನಾಥ್ ಹೇಳಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಂಗಳವಾರ ಮೂರು ಜನ ಅನುಮಾನಾಸ್ಪದ ವ್ಯಕ್ತಿಗಳನ್ನು ಆರೋಪಿಗಳನ್ನು ಹಿಡಿದಿದ್ದು ತುಮಕೂರು ತಾಲ್ಲೂಕಿನ ಚೋಳಂಬಳ್ಳಿ ಗ್ರಾಮಸ್ಥರು ಹಿಡಿದಿದ್ದಾರೆ. ಮಾಹಿತಿ ಮೇರೆಗೆ ತುಮಕೂರು ನಗರ ಠಾಣೆ ಪೊಲೀಸರು ತೆರಳಿದ್ದರು. ಅಲ್ಲಿ 15-20 ಜನರು ಮೂವರ ಮೇಲೆ ಹಲ್ಲೆ ನಡೆಸುತ್ತಿದ್ದುದ್ದನ್ನು ಕಂಡ ಪೊಲೀಸರು ಆರೋಪಿಗಳನ್ನು ಬಿಡಿಸಿದ್ದರು. ಮಹಮ್ಮದ್ ಅಫ್ತಾ, ಸೈಯದ್ ಖಾಸಿಂ ಸಾಬ್, ಹಾಗೂ ಶೇಖರ್ ಎಂಬುವರನ್ನು ನಗರ ಠಾಣೆ ಇನ್ ಸ್ಪೆಕ್ಟರ್ ಮತ್ತು ಸಿಬ್ಬಂದಿ ವಶಕ್ಕೆ ಪಡೆದಿದ್ದರು. ಇದರಲ್ಲಿ ಮಹಮದ್ ಅಫ್ತಾನ ಬಳಿ ಪಿಸ್ತೂಲ್ ಪತ್ತೆಯಾಗಿತ್ತು’ ಎಂದು ವಿವರಿಸಿದರು.
ಮೂವರನ್ನು ಠಾಣೆಗೆ ಕರೆತಂದು ಅಕ್ರಮ ಶಸ್ತ್ರಾಸ್ತ್ರ ಹೊಂದಿರುವ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖಾ ವಿಧಾನಗಳನ್ನು ಅನುಸರಿಸುತ್ತಿರುವಾಗ ಆರೋಪಿ ಮಹಮ್ಮದ್ ಅಫ್ತಾ ಕುಸಿದು ಬಿದ್ದಿದ್ದ. ಅತನನ್ನು ಜಿಲ್ಲಾ ಅಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಪರೀಕ್ಷೆ ನಡೆಸಿದ ವೈದ್ಯರು ಆರೋಪಿ ಮರಣ ಹೊಂದಿದ್ದಾರೆ ಎಂದು ತಿಳಿಸಿದರು ಎಂದು ವಿವರಿಸಿದರು.
ಈ ಬಗ್ಗೆ ಕೊಲೆ ಪ್ರಕರಣ ದಾಖಲಿಸಿಕೊಂಡು ಮಧುಗಿರಿ ಡಿಎಸ್ಪಿ ಅವರಿಗೆ ತನಿಖೆಗೆ ವಹಿಸಲಾಗಿದೆ. ಈ ಪ್ರಕರಣ ಕಸ್ಟೊಡಿಯಲ್ ಡೆತ್ ಪ್ರಕರಣವಾಗಿರುವುದರಿಂದ ರಾಜ್ಯ ಮಾನವ ಹಕ್ಕುಗಳ ಆಯೋಗದ ಮಾರ್ಗಸೂಚಿಯಂತೆ ಮುಂದಿನ ತನಿಖೆಗೆ ಸಿಐಡಿ ಘಟಕಕ್ಕೆ ವಹಿಸಲಾಗಿದೆ ಎಂದು ಹೇಳಿದರು.
ಮೃತಪಟ್ಟ ಆರೋಪಿ ಮಹಮ್ಮದ್ ಅಫ್ತಾ ಎಂಬುವವನ ಮೇಲೆ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಲಾಭಕ್ಕಾಗಿ ಕೊಲೆ ಪ್ರಕರಣ ದಾಖಲಾಗಿತ್ತು. ಅಲ್ಲದೇ, ಬೆಂಗಳೂರುನಗರದ ಜ್ಞಾನಭಾರತಿ ಮತ್ತು ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ದರೋಡೆಗೆ ಸಂಚು ಪ್ರಕರಣ ಹಾಗೂ ಹೆಣ್ಣೂರು ಮತ್ತು ಭಾರತಿ ಮತ್ತು ಭಾರತಿ ನಗರ ಪೊಲೀಸ್ ಠಾಣೆಯಲ್ಲಿ ಕಳ್ಳತನದ ಪ್ರಕರಣಗಳು ದಾಖಲಾಗಿರುವ ಬಗ್ಗೆ ಮಾಹಿತಿ ಇದೆ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.