ಬಳ್ಳಾರಿ: ಬಳ್ಳಾರಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ 63 ಅಲ್ಲಿಪುರ ಹೊರವಲಯದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಸಂಘಟನೆಯ ಮುಖಂಡ ಚಾನಾಳ್ ಶೇಖರ್ ನೇತೃತ್ವದಲ್ಲಿ ಬೆಳಿಗ್ಗೆ 5 ಗಂಟೆಯಿಂದಲೇ ರಸ್ತೆ ಬಂದ್ ಮಾಡಿದ್ದರಿಂದ ನೂರಾರು ವಾಹನಗಳ ಸಂಚಾರ ಸ್ಥಗಿತಗಿಂಡಿತ್ತು. ಇದರಿಂದ ಜಿಂದಾಲ್ ಉಕ್ಕು ಕಾರ್ಖಾನೆಗೆ ತೆರಳುವ ನೂರಾರು ಕಾರ್ಮಿಕರು ರಸ್ತೆಯಲ್ಲಿಯೇ ಉಳಿಯುವಂತಾಯಿತು.
ಕನ್ನಡಪರ ಸಂಘಟನೆಗಳ ಸದಸ್ಯರು ರಾಯಲ್ ವೃತ್ತದಲ್ಲಿ ಟೈರ್ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು. ಜಯ ಕರ್ನಾಟಕ ಸಂಘಟನೆ, ರೈತ ಸಂಘಟನೆಗಳು ಬಂದ್ಗೆ ಬೆಂಬಲ ಸೂಚಿಸಿವೆ.
ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ತೃತೀಯಲಿಂಗಿಗಳು ಪ್ರತಿಭಟನೆ ನಡೆಸಿದರು. ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಭಾವಚಿತ್ರಕ್ಕೆ ಉಗಿದು ಆಕ್ರೋಶ ವ್ಯಕ್ತಪಡಿಸಿದರು.
ತಮಿಳುನಾಡಿನ ಲಾರಿಗೆ ಕಲ್ಲು
ಪ್ರತಿಭಟನೆ ವೇಳೆ ಕೆಲವರು ತಮಿಳುನಾಡಿನ ಲಾರಿ ಮೇಲೆ ಕಲ್ಲು ತೂರಿದರು. ಕಲ್ಲು ತೂರಾಟ ನಡೆಸಿದ ಇಬ್ಬರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು.
ಖಾಲಿ ಕೊಡ ಪ್ರದರ್ಶನ
ರೆಡ್ಡಿ ಬೀದಿ ನಾಗರಿಕರು ಖಾಲಿ ಕೊಡಪಾನ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು. ‘ಕಾವೇರಿ ಮಹಾದಾಯಿ ಹೋರಾಟಕ್ಕೆ ಜಯವಾಗಲಿ’ ಎಂದು ಮಹಿಳೆಯರು ಮತ್ತು ಮಕ್ಕಳು ಘೋಷಣೆ ಕೂಗಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.