ADVERTISEMENT

ಬಿಜೆಪಿ ತೊರೆಯಲು ಬೆಳಮಗಿ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2018, 9:10 IST
Last Updated 21 ಏಪ್ರಿಲ್ 2018, 9:10 IST
ಬಿಜೆಪಿ ತೊರೆಯಲು ಬೆಳಮಗಿ ನಿರ್ಧಾರ
ಬಿಜೆಪಿ ತೊರೆಯಲು ಬೆಳಮಗಿ ನಿರ್ಧಾರ   

ಕಲಬುರ್ಗಿ: ಕಲಬುರ್ಗಿ ಗ್ರಾಮೀಣ ಮತ ಕ್ಷೇತ್ರದ ಬಿಜೆಪಿ ಟಿಕೆಟ್ ಕೈ ತಪ್ಪಿದ್ದಕ್ಕೆ ಆಕ್ರೋಶಗೊಂಡಿರುವ ಟಿಕೆಟ್ ಆಕಾಂಕ್ಷಿ ರೇವುನಾಯಕ ಬೆಳಮಗಿ ಬಿಜೆಪಿ ತೊರೆಯಲು ನಿರ್ಧರಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಂಬಿಸಿ ಕತ್ತು ಕೊಯ್ದಿದ್ದಾರೆ. ಕ್ರಿಮಿನಲ್ ಹಿನ್ನೆಲೆ, ಹಣ ಹಾಗೂ ತೋಲ್ಬಳ ಹೊಂದಿರುವ ಬಸವರಾಜ ಮತ್ತಿಮೂಡಗೆ ಟಿಕೆಟ್ ನೀಡಿದ್ದಾರೆ. ಹೀಗಾಗಿ ಪಕ್ಷ ತೊರೆಯಲು ನಿರ್ಧರಿಸಿದ್ದೇನೆ. ಪಕ್ಷೇತರ ಅಥವಾ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಬೆಂಬಲಿಗರು, ಬಂಜಾರ ಸಮಾಜದ ಮುಖಂಡರು ಒತ್ತಡ ಹೇರುತ್ತಿದ್ದಾರೆ. ಸಂಜೆ ಅಂತಿಮ ನಿರ್ಧಾರ ಪ್ರಕಟಿಸುತ್ತೇನೆ’ ಎಂದು ಹೇಳಿದರು.

‘ಈ ಹಿಂದೆ ಸಂಕಲ್ಪ ಯಾತ್ರೆ ಮಾಡಿದ್ದ ಯಡಿಯೂರಪ್ಪ, ರಾಜ್ಯದಾದ್ಯಂತ ಪ್ರವಾಸ ಕೈಗೊಂಡಿದ್ದರು. ಎಚ್.ಡಿ.ಕುಮಾರಸ್ವಾಮಿ ಮೋಸ ಮಾಡಿದ್ದಾನೆ, ಬೆನ್ನಿಗೆ ಚೂರಿ ಇರಿದಿದ್ದಾನೆ ಎಂದು ರಾಜ್ಯದ ಜನತೆಯ ಮುಂದೆ ಹೇಳಿದ್ದರು. ಈಗ ಅದೇ ಯಡಿಯೂರಪ್ಪ ನನಗೆ ಮೋಸ ಮಾಡಿದ್ದಾರೆ, ಕತ್ತು ಕೊಯ್ದಿದ್ದಾರೆ. ಈ ವಿಷಯವನ್ನು ರಾಜ್ಯದ ಜನತೆಗೆ ಹೇಳುತ್ತೇನೆ’ ಎಂದರು.

ADVERTISEMENT

ಕೋಲಿ, ವೀರಶೈವ- ಲಿಂಗಾಯತ, ಕುರುಬರು ಈಗ ಸಭೆ ನಡೆಸುತ್ತಿದ್ದಾರೆ. ಅವರು ಕೈಗೊಳ್ಳುವ ನಿರ್ಧಾರ ನೋಡಿಕೊಂಡು ನನ್ನ ಮುಂದಿನ ನಡೆಯನ್ನು ತೀರ್ಮಾನಿಸುತ್ತೇನೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.