ADVERTISEMENT

ಬೆಂಗಳೂರು ವಿವಿಯಲ್ಲೂ ಎಲ್ಲ ನೆಟ್ಟಗಿಲ್ಲ!

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2014, 19:30 IST
Last Updated 26 ನವೆಂಬರ್ 2014, 19:30 IST
ಬೆಂಗಳೂರು ವಿವಿಯಲ್ಲೂ ಎಲ್ಲ ನೆಟ್ಟಗಿಲ್ಲ!
ಬೆಂಗಳೂರು ವಿವಿಯಲ್ಲೂ ಎಲ್ಲ ನೆಟ್ಟಗಿಲ್ಲ!   

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾ­ಲಯದ ಮಹಿಳಾ ಅಧ್ಯಯನ ಕೇಂದ್ರದ ಮೂವರು ಪ್ರಾಧ್ಯಾಪಕರ ನೇಮಕವನ್ನು ಇತ್ತೀಚೆಗೆ ರಾಜ್ಯ ಹೈಕೋರ್ಟ್ ರದ್ದು ಮಾಡಿದೆ. ಇದನ್ನು ನೋಡಿದರೆ ಇಲ್ಲಿಯೂ ಎಲ್ಲ ನೆಟ್ಟಗಿಲ್ಲ ಎನ್ನುವುದು ದಿಟವಾಗಿದೆ.

ಕೋರ್ಟ್ ಆದೇಶ ಬರುತ್ತಿದ್ದಂತೆಯೇ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಈ ಹಿಂದೆ ನಡೆದ ಹಲವಾರು ನೇಮಕಾತಿಗಳ ಬಗ್ಗೆ ತಕರಾರುಗಳು ಹೊರಬರುತ್ತಿವೆ. ಈ ಸಂಬಂಧದ ಮಾಹಿತಿಗಳು ದಾಖಲೆ­ಗಳ ಸಹಿತ ರಾಜ್ಯಪಾಲರು, ಉನ್ನತ ಶಿಕ್ಷಣ ಇಲಾಖೆಗೆ ಸಲ್ಲಿಕೆಯಾಗುತ್ತಿವೆ.

‘ಬೆಂಗಳೂರು ವಿಶ್ವವಿದ್ಯಾಲಯದಲ್ಲಿ 1997–98 ಹಾಗೂ 2006–07ನೇ ಸಾಲಿ­ನಲ್ಲಿ ನಡೆದ ನೇಮಕಾತಿಗಳು ಸರಿ­ಯಾಗಿಲ್ಲ. ಅಕ್ರಮ ನಡೆದಿದೆ’ ಎಂದು ರಾಜ್ಯಪಾಲರಿಗೆ ದೂರು ಸಲ್ಲಿಸಲಾಗಿದೆ. ‘ಬಿ.ಕಾಂ ಮುಗಿಸಿ ನಂತರ ಅಂಚೆ ಮತ್ತು ತೆರಪಿನ ಶಿಕ್ಷಣ ನಿರ್ದೇಶನಾಲಯ­ದಿಂದ ಕನ್ನಡ ಸ್ನಾತಕೋತ್ತರ ಪದವಿ ಪಡೆ­ದ­ವರಿಗೂ ನೇಮಕಾತಿ ನೀಡ­ಲಾಗಿದೆ. 2006ರಲ್ಲಿ ಕನ್ನಡ ಅಧ್ಯಯನ ಕೇಂದ್ರ­ದಲ್ಲಿ ಉಪನ್ಯಾ­ಸಕರ ಹುದ್ದೆಗೆ ಅರ್ಜಿ ಆಹ್ವಾ­ನಿಸಿ­ದಾಗ 250ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದವು. ಅದ­ರಲ್ಲಿ ಸಾಕಷ್ಟು ಅರ್ಹರು ಇದ್ದರೂ ಅವ­ರನ್ನು ಬಿಟ್ಟು ಅನರ್ಹ­ರನ್ನು ನೇಮಿಸಿ­ಕೊಳ್ಳಲಾಗಿದೆ’ ಎಂದು ಆರೋಪಿಸ­ಲಾಗಿದೆ.

ಮೂವರ ನೇಮಕ ರದ್ದು

ಬೆಂಗಳೂರು ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ಕೇಂದ್ರದಲ್ಲಿ ಖಾಲಿ ಇರುವ ಮೂರು ಉಪ­ನ್ಯಾಸಕರ ಹುದ್ದೆ ಗಳ ಭರ್ತಿಗೆ 2006ರ ಅ.14ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಸಾಮಾನ್ಯ ವರ್ಗಕ್ಕೆ ತಲಾ ಒಂದೊಂದು ಹುದ್ದೆ ಮೀಸ­ಲಾ­ಗಿದ್ದವು. ಸುದೇಷ್ಣಾ ಮುಖರ್ಜಿ, ಡಾ.ಸಿ.ಡಿ. ವೆಂಕಟೇಶ್‌, ಡಾ.ಎಂ. ಸಿದ್ದಪ್ಪ ನೇಮಕ­ಗೊಂಡಿ­ದ್ದರು. ಈ ಹುದ್ದೆಗಳಿಗೆ  ಅಕ್ರಮವಾಗಿ ನೇಮ­ಕಾತಿ ನಡೆದಿದೆ ಎಂದು ಕಲ್ಬುರ್ಗಿ ಜಿಲ್ಲೆ ಚಿತ್ತಾ­ಪುರ ತಾಲ್ಲೂಕಿನ ಡಾ.ಪ್ರಕಾಶ ಭೀಮ­ರಾಯ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಈ ಮೂವರ ನೇಮಕವನ್ನು ರದ್ದು ಮಾಡಿದೆ.

‘ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿದವರಿಗೂ ನೇಮಕಾತಿ ಸಿಕ್ಕಿದೆ. ಅಭ್ಯರ್ಥಿಯೊಬ್ಬರು ಶಾಲೆ ಮತ್ತು ಕಾಲೇಜಿನ ದಾಖಲೆಗಳ ಪ್ರಕಾರ ಹಿಂದು­ಳಿದ  ಜಾತಿಗೆ ಸೇರಿದವರಾಗಿ­ದ್ದರೂ ನೇಮ­ಕಾತಿ ಸಂದರ್ಭದಲ್ಲಿ ಪರಿಶಿಷ್ಟ ಜಾತಿಯ ಪ್ರಮಾಣ ಪತ್ರ ಪಡೆದು ನೇಮಕ­ಗೊಂಡಿದ್ದಾರೆ. ಈ ಪ್ರಮಾಣ ಪತ್ರವನ್ನು ಪರಿಶೀಲನೆ ಮಾಡಲಾಗಿಲ್ಲ’ ಎಂದು ದೂರಲಾಗಿದೆ.

‘ಕನ್ನಡ ಅಧ್ಯಯನ ಕೇಂದ್ರದಲ್ಲಿ ಇಂಗ್ಲಿಷ್‌ ಉಪನ್ಯಾಸಕರನ್ನು ನೇಮಿಸ­ಲಾಗಿದೆ. ಇಂತಹ ಪದ್ಧತಿ ಬಹಳ ಕಾಲ­ದಿಂದ ಇದ್ದರೂ ಇಂಗ್ಲಿಷ್‌ ಉಪ­ನ್ಯಾಸಕ­ರನ್ನು ಇಂಗ್ಲಿಷ್‌ ಆಯ್ಕೆ ಸಮಿತಿಯೇ ಆರಿಸುತ್ತಿತ್ತು. ಆದರೆ ಈಗ ಇರುವ ಇಂಗ್ಲಿಷ್‌ ಉಪನ್ಯಾಸಕರನ್ನು ಕನ್ನಡ ಆಯ್ಕೆ ಸಮಿತಿ ಆಯ್ಕೆ ಮಾಡಿದೆ. ಅವರಿಗೆ ಆಗ ಕನ್ನಡ ಉಪನ್ಯಾಸಕ ಎಂದೇ ನೇಮಕಾತಿ ಪತ್ರ ನೀಡಲಾಗಿತ್ತು. ಆದರೆ ಇದು ವಿವಾದಕ್ಕೆ ಕಾರಣವಾದ ನಂತರ ಮತ್ತೊಂದು ಆದೇಶ ಮಾಡಿ ಕನ್ನಡ ಅಧ್ಯ­ಯನ ಕೇಂದ್ರದಲ್ಲಿ ಇಂಗ್ಲಿಷ್‌ ಉಪ­ನ್ಯಾಸಕ ಎಂದು ನೇಮಕಾತಿ ಆದೇಶ ನೀಡ­ಲಾಗಿದೆ.

ಹೀಗೆ ನೇಮಕಗೊಂಡ ವ್ಯಕ್ತಿ ವಿಶ್ವ­ವಿದ್ಯಾಲಯದ ಸ್ನಾತ­ಕೋತ್ತರ ಕನ್ನಡ ಪರೀಕ್ಷಾ ಮಂಡಳಿಯ ಅಧ್ಯಕ್ಷ­ರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕನ್ನಡ ವಿಷಯ­ದಲ್ಲಿ ಉತ್ತೀರ್ಣರಾಗಿರುವ ಸಂಶೋ­ಧನಾ ವಿದ್ಯಾರ್ಥಿಗಳಿಗೆ ಯುಜಿಸಿ ಹಾಗೂ ವಿಶ್ವವಿದ್ಯಾಲಯಗಳ ನಿಯಮ­ಗಳನ್ನು ಉಲ್ಲಂಘಿಸಿ ಮಾರ್ಗದರ್ಶನ ಮಾಡುತ್ತಿ­ದ್ದಾರೆ’ ಎಂದು ಆರೋಪಿಸಲಾಗಿದೆ.
 
ಎಲ್ಲದಕ್ಕೂ ಪ್ರಶಾಸನ ಸಮಿತಿ ಅನುಮೋದನೆ
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಕೈಗೊ­­ಳ್ಳ­ಲಾದ ಎಲ್ಲ ನಿರ್ಧಾರಗಳಿಗೂ ಪ್ರಶಾಸನ ಸಮಿತಿ ಅನುಮೋದನೆ ನೀಡಿದೆ ಎಂದು ಪ್ರಭಾರ ಕುಲಪತಿ ಪ್ರೊ.ಶ್ರೀನಿವಾಸ ವರಖೇಡಿ ಸ್ಪಷ್ಟನೆ ನೀಡಿದ್ದಾರೆ.

ಸರ್ಕಾರಿ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿ­ರುವ ಅಭ್ಯರ್ಥಿಗಳಿಗೆ 10 ವರ್ಷದ ವಿನಾಯಿತಿ ಇರು­ವು­ದರಿಂದ ಪಿ.ಆರ್‌.ಪಾಗೋಜಿ ಅವರ ವಯೋ­ಮಿತಿ ಸಡಿಲಿಸಿ ನೇಮಿಸಿಕೊಳ್ಳಲಾಗಿದೆ. ಇದೇ ರೀತಿ ಅವರ ವೇತನವನ್ನೂ ಪರಿಷ್ಕರಿಸ­ಲಾಗಿದೆ ಎಂದು ಅವರು ಹೇಳಿದ್ದಾರೆ.

ಘಟಕ ಕಾಲೇಜುಗಳನ್ನು ವಿಶ್ವವಿದ್ಯಾಲಯದಲ್ಲಿ ವಿಲೀನಗೊಳಿಸಿ ಅಲ್ಲಿನ ಸಿಬ್ಬಂದಿ ಸೇವೆಯನ್ನು ವಿಲೀನಗೊಳಿಸದೇ ಇರುವುದರ ವಿರುದ್ಧ ಸಿಬ್ಬಂದಿ ಹೈಕೋರ್ಟ್‌ಗೆ ಹೋಗಿದ್ದರು. ಅವರ ಅರ್ಜಿ­ಯನ್ನು ಕೋರ್ಟ್‌ ವಜಾ ಮಾಡಿತ್ತು. ಘಟಕ ಕಾಲೇಜಿನಲ್ಲಿ ಇರುವ ಸಿಬ್ಬಂದಿಗಳಿಗೆ ಪ್ರಾಧ್ಯಾಪಕ ಹುದ್ದೆಗೆ ನೇಮಕವಾಗುವ ಅರ್ಹತೆ ಇಲ್ಲದೇ ಇರುವುದರಿಂದ ಅವರನ್ನು ನೇಮಿಸಿಲ್ಲ ಎಂದು ಅವರು ಹೇಳಿದ್ದಾರೆ.

ಡಾ.ವಿ.ಗಿರೀಶ್‌ಚಂದ್ರ ಅವರು ಮಂಗಳೂರು ವಿಶ್ವವಿದ್ಯಾಲಯ ಹಾಗೂ ಕರ್ನಾಟಕ ವಿಶ್ವವಿದ್ಯಾ­ಲಯದ ಘಟಕ ಕಾಲೇಜು­ಗಳಲ್ಲಿ ಉಪನ್ಯಾಸಕ­ರಾಗಿ ಸೇವೆ ಸಲ್ಲಿಸಿದ್ದಾರೆ. ಬಿ.ಕಾಂ ಪದವಿಯ ಜೊತೆಗೆ ಸಂಸ್ಕೃತ ಸಾಹಿತ್ಯ ಪರೀಕ್ಷೆಯಲ್ಲಿಯೂ ತೇರ್ಗಡೆಯಾಗಿದ್ದಾರೆ. ಸ್ನಾತ­ಕೋತ್ತರ ಪದವಿ ಪಡೆದಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.

(ಮುಂದುವರಿಯುವುದು)

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.