ಬೆಂಗಳೂರು: ಚಿಕ್ಕಮಗಳೂರು, ಹಾಸನ, ಬಳ್ಳಾರಿ, ಕೊಡಗು, ಚಾಮರಾಜನಗರ, ಮೈಸೂರು, ಮಂಡ್ಯ, ಬೆಳಗಾವಿ ಜಿಲ್ಲೆಗಳಲ್ಲಿ ಮಂಗಳವಾರ ರಾತ್ರಿ ಮತ್ತು ಬುಧವಾರ ಬಿರುಗಾಳಿಯಿಂದ ಕೂಡಿದ ಮಳೆಯಾಗಿದೆ.ಸಿಡಿಲು ಬಡಿದು ತರೀಕೆರೆ ತಾಲ್ಲೂಕಿನಲ್ಲಿ ಮತ್ತು ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ತಲಾ ಒಬ್ಬರು ಸತ್ತಿದ್ದಾರೆ.
ಚಾಮರಾಜನಗರ ವರದಿ: ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಹಂಗಳ ಗ್ರಾಮದ ಹೊರವಲಯದಲ್ಲಿ ಸಿಡಿಲು ಬಡಿದು ವ್ಯಕ್ತಿಯೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಮೃತನನ್ನು ತಮಿಳುನಾಡಿನ ನೀಲಗಿರಿ ಜಿಲ್ಲೆಯ ಊಟಿ ತಾಲ್ಲೂಕಿನ ಕಲ್ಲಟ್ಟಿ ಗ್ರಾಮದ ಈಶ್ವರನ್ (29) ಎಂದು ಗುರುತಿಸಲಾಗಿದೆ. ತೆರಕಣಾಂಬಿಯಲ್ಲಿ ಸಿಡಿಲಿಗೆ ಎರಡು ಎತ್ತುಗಳು ಬಲಿಯಾಗಿವೆ.
ಸಕಲೇಶಪುರ (ಹಾಸನ ಜಿಲ್ಲೆ) ವರದಿ: ತಾಲ್ಲೂಕಿನಲ್ಲಿ ಸಿಡಿಲು ಬಡಿದು ಮೂವರಿಗೆ ಗಂಭೀರ ಗಾಯಗಳಾಗಿವೆ.
ಬಾಳ್ಳುಪೇಟೆಯ ಜೆ.ಪಿ ನಗರ ಬಡಾವಣೆಯ ನಿವಾಸಿ ಮುತ್ತಮ್ಮ ಅವರ ಬಲಭಾಗದ ದೇಹಕ್ಕೆ ಪೆಟ್ಟು ಬಿದ್ದಿದೆ. ಬಾಳ್ಳು ಸಮೀಪದ ಮಡ್ನಕೆರೆ ಗ್ರಾಮದಲ್ಲಿ ಮನೆಯಂಗಳದಲ್ಲಿ ಆಟವಾಡಿಕೊಂಡು ಮನೆಯೊಳಗೆ ಹೋಗುತ್ತಿದ್ದ 13 ವರ್ಷದ ತಾರೇಶ್ಗೆ ಸಿಡಿಲು ಬಡಿದು ದೇಹದ ಒಂದು ಭಾಗ ಸ್ವಾಧೀನ ಕಳೆದುಕೊಂಡಿದ್ದು, ಬಾಳ್ಳು ಸರ್ಕಾರಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಹಾಸನಕ್ಕೆ ಕಳಿಸಲಾಗಿದೆ.
ಕುಶಾಲನಗರ ಬಡಾವಣೆಯ ಫಯಾಜ್ಖಾನ್ ಮನೆ ಛಾವಣಿ ಕುಸಿದಿದ್ದು, ಮನೆಯೊಳಗಿದ್ದ ಅವರ ಪುತ್ರ ತೌಹೀದ್ಖಾನ್ಗೆ ಗಂಭೀರ ಗಾಯಗಳಾಗಿವೆ.ಸಮೀಪದ ಆಚಂಗಿ ಬಡಾವಣೆ ಮತ್ತು ಹಲಸುಲಿಗೆ ನಡುವಿನ ರಾಜ್ಯ ಹೆದ್ದಾರಿಯಲ್ಲಿ ಮರವೊಂದು ಉರುಳಿ ನಾಲ್ಕು ವಿದ್ಯುತ್ ಕಂಬಗಳು ತುಂಡಾಗಿದ್ದು, ತಂತಿಗಳು ನೆಲಕ್ಕೆ ಬಿದ್ದಿವೆ.
ಹೊಳೆನರಸೀಪುರ ವರದಿ: ತಾಲ್ಲೂಕಿನಲ್ಲಿ ಆಲಿಕಲ್ಲು ಮಳೆಯಿಂದಾಗಿ ನೂರಾರು ಅಡಿಕೆ ಮರಗಳು ನೆಲಕ್ಕುರುಳಿವೆ.
ಮಡಿಕೇರಿ ವರದಿ: ಮಡಿಕೇರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬುಧವಾರ ಮಧ್ಯಾಹ್ನ ಸುಮಾರು 1 ಗಂಟೆ ಕಾಲ ಉತ್ತಮವಾಗಿ ಮಳೆ ಸುರಿಯಿತು.
ಬೆಳಗಾವಿ ವರದಿ: ಜಿಲ್ಲೆಯ ನಿಪ್ಪಾಣಿ ಪಟ್ಟಣದಲ್ಲಿ ಬುಧವಾರ ಸಂಜೆ ಅರ್ಧ ತಾಸು ರಭಸದ ಮಳೆಯಾಗಿದೆ.
ತರೀಕೆರೆ (ಚಿಕ್ಕಮಗಳೂರು ಜಿಲ್ಲೆ) ವರದಿ: ಸಮೀಪದ ಅರಸೀಕೆರೆ ಕಾಲೊನಿ ಬಳಿ ಆರ್ಮುಗಂ (೨೫) ಎಂಬ ವ್ಯಕ್ತಿಗೆ ಸಿಡಿಲು ಬಡಿದು ಮೃತಪಟ್ಟಿದ್ದಾರೆ.
ಸಂಡೂರು (ಬಳ್ಳಾರಿ ಜಿಲ್ಲೆ): ತಾಲ್ಲೂಕಿನ ಅಂಕಮನಾಳು ಗ್ರಾಮದಲ್ಲಿ ಮಂಗಳವಾರ ರಾತ್ರಿ ಭಾರಿ ಗಾಳಿಯಿಂದ ಕೂಡಿದ ಆಲಿಕಲ್ಲು ಮಳೆಯಿಂದ ಗ್ರಾಮದಲ್ಲಿ ಬಾಳೆ ಬೆಳೆಗೆ ಹಾನಿಯಾಗಿದೆ. ಸುಮಾರು 30 ಎಕರೆಗೂ ಹೆಚ್ಚು ಪ್ರದೇಶ-ದಲ್ಲಿ ಬೆಳೆದಿದ್ದ ಬಾಳೆ ಗಿಡಗಳು ಮುರಿದುಬಿದ್ದಿವೆ. ಎರಡು ತಿಂಗಳು ಕಳೆದಿದ್ದರೆ ಬೆಳೆ ಕೈಗೆ ಬರುತ್ತಿತ್ತು. ಆದರೆ ಈ ಮಳೆಯಿಂದ ಅಪಾರ ಹಾನಿಯಾಗಿದೆ ಎಂದು ರೈತರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.