ADVERTISEMENT

ಮೆಟ್ರೊ ನಿಗಮದಲ್ಲಿ ಕನ್ನಡೇತರರ ನೇಮಕ; ಸರೋಜಿನಿ ಮಹಿಷಿ ವರದಿ ಆಶಯ ಉಲ್ಲಂಘನೆ: ಕನ್ನಡ ಅಭಿವೃದ್ಧಿ ಪ್ರಾಧಿಕಾರ

​ಪ್ರಜಾವಾಣಿ ವಾರ್ತೆ
Published 27 ಜುಲೈ 2017, 11:25 IST
Last Updated 27 ಜುಲೈ 2017, 11:25 IST
ಮೆಟ್ರೊ ನಿಗಮದಲ್ಲಿ ಕನ್ನಡೇತರರ ನೇಮಕ; ಸರೋಜಿನಿ ಮಹಿಷಿ ವರದಿ ಆಶಯ ಉಲ್ಲಂಘನೆ: ಕನ್ನಡ ಅಭಿವೃದ್ಧಿ ಪ್ರಾಧಿಕಾರ
ಮೆಟ್ರೊ ನಿಗಮದಲ್ಲಿ ಕನ್ನಡೇತರರ ನೇಮಕ; ಸರೋಜಿನಿ ಮಹಿಷಿ ವರದಿ ಆಶಯ ಉಲ್ಲಂಘನೆ: ಕನ್ನಡ ಅಭಿವೃದ್ಧಿ ಪ್ರಾಧಿಕಾರ   

ಬೆಂಗಳೂರು: ಬೆಂಗಳೂರು ಮೆಟ್ರೊ ರೈಲು ನಿಗಮ(ಬಿಎಂಆರ್‌ಸಿಎಲ್‌)ದಲ್ಲಿ ಕನ್ನಡ ಭಾಷೆ ಬಳಕೆಗೆ ಪ್ರಾತಿನಿಧ್ಯ ಇಲ್ಲದಿರುವುದು ಹಾಗೂ ಅಧಿಕ ಸಂಖ್ಯೆಯಲ್ಲಿ ಕನ್ನಡೇತರರನ್ನು ನಿಗಮ ನೇಮಕ ಮಾಡಿಕೊಂಡಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಗತ್ಯ ಕ್ರಮ ಕೈಗೊಳ್ಳುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಮುಖೇನ ಮನವಿ ಮಾಡಿದೆ.

2011ರಿಂದಲೂ ಮೆಟ್ರೊ ನಿಗಮ ಆಡಳಿತ ಹಾಗೂ ನಾಮಫಲಕದಲ್ಲಿ ಭಾಷಾ ನೀತಿಯನ್ನು ಸ್ಪಷ್ಟವಾಗಿ ಉಲ್ಲಂಘಿಸುತ್ತಿದೆ. ಮೆಟ್ರೊ ನಾಮಫಲಕದಲ್ಲಿ ದ್ವಿಭಾಷೆ ಅನುಷ್ಠಾನ ಹಾಗೂ ಆಡಳಿತದಲ್ಲಿ ಕನ್ನಡ ಭಾಷಾ ಸಂಸ್ಕೃತಿಯನ್ನು ಬಿಂಬಿಸುವಂತ ವ್ಯವಸ್ಥೆ ಜಾರಿಯಾಗಲು ಸಂಬಂಧಪಟ್ಟವರಿಗೆ ನಿರ್ದೇಶಬೇಕೆಂದು ಪತ್ರ ಬರೆಯಲಾಗಿದೆ.

ಮೆಟ್ರೊ ನಿಗಮದ ಸ್ವಚ್ಛತೆ, ಭದ್ರತಾ ಸೇವೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರಲ್ಲಿ ಹೆಚ್ಚಿನವರು ಕನ್ನಡೇತರರು. ರಾಷ್ಟ್ರದಲ್ಲಿ ಅತಿ ಹೆಚ್ಚು ಎಂಜಿನಿಯರಿಂಗ್‌ ಕಾಲೇಜುಗಳನ್ನು ಹೊಂದಿರುವ ರಾಜ್ಯದಲ್ಲಿ ಪ್ರತಿಭಾವಂತ ಎಂಜಿನಿಯರ್‌ಗಳಿದ್ದಾರೆ. ಆದರೂ ನೇಮಕಗೊಂಡಿರುವ ಏಳು ಮುಖ್ಯ ಅಭಿಯಂತರರು ಕನ್ನಡೇತರರು. ಇಲ್ಲಿ ಸರೋಜಿನಿ ಮಹಿಷಿ ವರದಿ ಆಶಯವನ್ನು ಸ್ಪಷ್ಟವಾಗಿ ಉಲ್ಲಂಘಿಸಿದ್ದು, ಈ ಅನ್ಯಭಾಷೆಯ ಅಭಿಯಂತರರನ್ನು ಸೇವೆಯಿಂದ ವಿಮುಕ್ತಿಗೊಳಿಸಬೇಕಾಗುತ್ತದೆ ಎನ್ನಲಾಗಿದೆ.

ADVERTISEMENT

ಈ ಸಂಬಂಧ ಸೂಕ್ತ ಕ್ರಮಕೈಗೊಳ್ಳುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರೊ.ಎಸ್‌.ಜಿ.ಸಿದ್ಧರಾಮಯ್ಯ ಅವರು ಸಿಎಂ ಸಿದ್ದರಾಮಯ್ಯ, ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಸುಭಾಷ್‌ಚಂದ್ರ ಖುಂಟಿಆ ಹಾಗೂ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾದ ಮಹೇಂದ್ರ ಜೈನ್‌ ಅವರಿಗೆ ಪತ್ರ ಬರೆದಿದ್ದಾರೆ. ಪರಿಶೀಲನಾ ತಂಡದೊಂದಿಗೆ ಮೆಟ್ರೋ ಭೇಟಿಯಲ್ಲಿ ಕಂಡು ಬಂದ ಲೋಪದೋಷಗಳನ್ನು ಸರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ನಿರ್ದೇಶನ ನೀಡಿರುವುದಾಗಿಯೂ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.