ADVERTISEMENT

ಮೈಸೂರು ಅರಮನೆ ವಶಕ್ಕೆ ಆಗ್ರಹ

‘ಸಂವಿಧಾನ ಭಾರತ’ ಸಂವಾದ ಕಾರ್ಯಕ್ರಮದಲ್ಲಿ ಕಡಿದಾಳ್ ಶಾಮಣ್ಣ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2015, 19:30 IST
Last Updated 3 ಅಕ್ಟೋಬರ್ 2015, 19:30 IST

ಹೊಸಪೇಟೆ: ‘ರಾಜ್ಯ ಸರ್ಕಾರವು ಮೈಸೂರು ಅರಮನೆಯನ್ನು ವಶಪಡಿಸಿಕೊಂಡು ಅಲ್ಲಿ ಕಚೇರಿಗಳನ್ನು ಸ್ಥಾಪಿಸಬೇಕು’ ಎಂದು ರೈತಪರ ಹೋರಾಟಗಾರ ಕಡಿದಾಳು ಶಾಮಣ್ಣ ಆಗ್ರಹಿಸಿದರು. ಕೊಟ್ಟೂರಿನ ಬಯಲು ಸಾಹಿತ್ಯ ವೇದಿಕೆ ವತಿಯಿಂದ ಶನಿವಾರ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪಂಪ ಸಭಾಂಗಣದಲ್ಲಿ ನಡೆದ ‘ಸಂವಿಧಾನ ಭಾರತ’ ಸಂವಾದ ಉದ್ಘಾಟಿಸಿ ಮಾತನಾಡಿದರು.

‘ಸ್ವಾತಂತ್ರ್ಯ ಬಂದು ಹಲವು ದಶಕಗಳೇ ಕಳೆದಿದ್ದರೂ ಮೈಸೂರು ಅರಮನೆಯಲ್ಲಿ ಇಂದಿಗೂ ದಸರಾ ಹೆಸರಿನಲ್ಲಿ ನಡೆಯುವ ಕಾರ್ಯಕ್ರಮಗಳು ಪ್ರಜಾಪ್ರಭುತ್ವವನ್ನು ಅಣಕಿಸುವಂತಹವು. ಸರ್ಕಾರ ಅರಮನೆ ವಶಪಡಿಸಿಕೊಂಡು, ರಾಜಪ್ರಭುತ್ವವನ್ನು ಕೊನೆಗಾಣಿಸಬೇಕು’ ಎಂದು ಒತ್ತಾಯಿಸಿದ ಅವರು, ತಾವು ವಿದ್ಯಾರ್ಥಿಯಾಗಿದ್ದ ವೇಳೆ ಜಂಬೂ ಸವಾರಿ ನಡೆಯುವಾಗ ಕಲ್ಲು ಬೀಸಿದ್ದನ್ನು ನೆನಪಿಸಿಕೊಂಡರು.

‘ರೈತರು ತೀವ್ರ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ದಸರಾ ಉದ್ಘಾಟಿಸಲು ಮನಸಾಕ್ಷಿ  ಒಪ್ಪಲಾರದು. ಅಲ್ಲದೇ ಅರಮನೆಯೊಳಗೆ ನಡೆಯುವ ರಾಜ ಸಂಪ್ರದಾಯದ ಚಟುವಟಿಕೆಗಳು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದ್ದು, ಈ ಕಾರಣದಿಂದ ದಸರಾ ಉದ್ಘಾಟಿಸಲು ನಿರಾಕರಿಸಿದೆ’ ಎಂದು  ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ಹಂಪಿ ಕನ್ನಡ ವಿ.ವಿ ಕುಲಪತಿ ಪ್ರೊ. ಮಲ್ಲಿಕಾ ಎಸ್ ಘಂಟಿ, ‘ಜನಸಾಮಾನ್ಯರ ಚಿಂತನೆಗಳು ದಾರಿ ತಪ್ಪಿದಾಗ ವಿಶ್ವವಿದ್ಯಾಲಯಗಳು ಅವುಗಳನ್ನು ಸರಿಪಡಿಸುವ ಕಾರ್ಯಕ್ಕೆ ಮುಂದಾಗಬೇಕು’ ಎಂದರು. ‘ನಾಯಕರನ್ನು ಜಾತಿಗಳಿಗೆ ಕಟ್ಟಿ ಹಾಕುವ ಪ್ರಯತ್ನ ನಡೆಯುತ್ತಿದೆ, ಮೀಸಲಾತಿ ತೆಗೆಯುವ ಮಾತನ್ನಾಡಿ ಸಾಮಾಜಿಕವಾಗಿ ಸಮಾನ ಸ್ಥಾನಮಾನ ವಂಚಿಸುವ ಪಿತೂರಿ ನಡೆಯುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.