ಮೊಳಕಾಲ್ಮುರು (ಚಿತ್ರದುರ್ಗ ಜಿಲ್ಲೆ): ತಾಲ್ಲೂಕಿನ ರಾಂಪುರ ಬಳಿ ಶನಿವಾರ ಲಾರಿಯೊಂದು ಟೈರ್ ಸಿಡಿದ ಪರಿಣಾಮ ಎರಡು ಆಟೊ ಮತ್ತು ಟೆಂಪೊ ಟ್ರಾವೆಲರ್ಗೆ ಡಿಕ್ಕಿ ಹೊಡೆದಿದ್ದು, ಒಟ್ಟು 14 ಮಂದಿ ಮೃತಪಟ್ಟಿದ್ದಾರೆ. 20 ಮಂದಿ ಗಾಯಗೊಂಡಿದ್ದಾರೆ.
ಬೆಂಗಳೂರು– ಬಳ್ಳಾರಿ ರಾಜ್ಯ ಹೆದ್ದಾರಿಯ ರಾಂಪುರದ ಹರ್ಷ ಡಾಬಾ ಮುಂಭಾಗ ಬೆಳಿಗ್ಗೆ 11 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ.
ಬಳ್ಳಾರಿಯಿಂದ ಚಳ್ಳಕೆರೆ ಕಡೆ ಭತ್ತ ತುಂಬಿಕೊಂಡು ಹೋಗುತ್ತಿದ್ದ ಈ ಲಾರಿ ಮೊದಲು ಪ್ರಯಾಣಿಕರ ಆಟೊಕ್ಕೆ ಡಿಕ್ಕಿ ಹೊಡೆಯಿತು. ನಂತರ ಟೆಂಪೊ ಟ್ರಾವೆಲರ್ಗೆ ಡಿಕ್ಕಿಯಾಗಿ, ಎದುರಿಗೆ ಬರುತ್ತಿದ್ದ ಮತ್ತೊಂದು ಪ್ರಯಾಣಿಕರ ಆಟೊಕ್ಕೂ ಡಿಕ್ಕಿಯಾಗಿದೆ. ಬಳಿಕ ಲಾರಿ ಉರುಳಿ ಬಿದ್ದಿದೆ.
ಚೆಲ್ಲಾಪಿಲ್ಲಿಯಾದ ಹೆಣಗಳು: ಹೆದ್ದಾರಿಯಲ್ಲಿ 11 ಜನ ಸ್ಥಳದಲ್ಲೇ ಮೃತಪಟ್ಟಿರುವುದು ಅಪಘಾತದ ತೀವ್ರತೆ ಹೇಳುವಂತಿತ್ತು. ಚಿಂತಾಜನಕ ಸ್ಥಿತಿಯಲ್ಲಿದ್ದ ಗಾಯಾಳುಗಳಲ್ಲಿ ಮೂವರು ಬಳ್ಳಾರಿ ವಿಮ್ಸ್ನಲ್ಲಿ ಮೃತಪಟ್ಟಿದ್ದಾರೆ.
ಬಳ್ಳಾರಿ ವರದಿ: ರಾಂಪುರದಿಂದ ಅಂಬ್ಯುಲೆನ್ಸ್ ಮೂಲಕ ಬಳ್ಳಾರಿ ವಿಮ್ಸ್ ಗೆ 21 ಜನರನ್ನು ಚಿಕಿತ್ಸೆಗೆ ದಾಖಲಿಸಲಾಗಿತ್ತು. ವಿಮ್ಸ್ ಅಧಿಕ್ಷಕ ಡಾ. ಶ್ರೀನಿವಾಸ್, ಆಡಳಿತಾಧಿಕಾರಿ ಅನ್ನಪೂರ್ಣ ತುರ್ತು ಚಿಕಿತ್ಸಾ ಘಟಕ ದಲ್ಲಿಯೇ ಇದ್ದು ಚಿಕಿತ್ಸೆಗೆ ಮಾರ್ಗದರ್ಶನ ಮಾಡಿದ್ದಾರೆ.
[related]
ಬಳ್ಳಾರಿ ಜಿಲ್ಲೆಗೆ ಬರ ಅಧ್ಯಯನ ಮತ್ತು ನಾನಾ ಕಾಮಗಾರಿ ಪರಿಶೀಲನೆಗೆ ಆಗಮಿಸಿದ್ದ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್ ಬಳ್ಳಾರಿ ಉಸ್ತುವಾರಿ ಸಚಿವ ಸಂತೋಷ್ ಲಾಡ್ ವಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ದಾಖಲಾದ ಗಾಯಾಳುಗಳಿಗೆ ಸಾಂತ್ವಾನ ಹೇಳಿದರು.
ನಂತರ ಮಾತನಾಡಿದ ಸಚಿವ ಸೂಕ್ತ ಚಿಕಿತ್ಸೆಗೆ ಸೂಚನೆ ನೀಡಿದ್ದೇವೆ. ಯಾವುದೇ ಸಮಸ್ಯೆಯಾಗದಂತೆ ಚಿಕಿತ್ಸೆ ನೀಡಲಾಗುತ್ತದೆ ಎಂದು ಹೇಳಿದರು.
ಮುಖ್ಯಾಂಶಗಳು
* ಶವ ಸಂಸ್ಕಾರಕ್ಕೆ ಹೋಗುತ್ತಿದ್ದ ಮೂವರು ಬಲಿ
* ಪತ್ತೆಯಾಗದ ಕುಲುಮೆ ಕಾರ್ಮಿಕರ ಗುರುತು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.