ADVERTISEMENT

ರಮ್ಯಾಗೆ ಗೌರಿ ಹಬ್ಬದ ಬಾಗಿನ ರವಾನೆ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2017, 19:50 IST
Last Updated 23 ಆಗಸ್ಟ್ 2017, 19:50 IST
ಮಂಡ್ಯದ ಅಂಚೆ ಕಚೇರಿ ಎದುರು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್‌ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಅವರಿಗೆ ಗೌರಿ ಹಬ್ಬದ ಬಾಗಿನ ರವಾನೆ ಮಾಡುವ ಮೂಲಕ ಬುಧವಾರ ಪ್ರತಿಭಟನೆ ನಡೆಸಿದರು
ಮಂಡ್ಯದ ಅಂಚೆ ಕಚೇರಿ ಎದುರು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್‌ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಅವರಿಗೆ ಗೌರಿ ಹಬ್ಬದ ಬಾಗಿನ ರವಾನೆ ಮಾಡುವ ಮೂಲಕ ಬುಧವಾರ ಪ್ರತಿಭಟನೆ ನಡೆಸಿದರು   

ಮಂಡ್ಯ: ಕಾಂಗ್ರೆಸ್‌ನ ಸಾಮಾಜಿಕ ಜಾಲತಾಣ ಮುಖ್ಯಸ್ಥೆ ರಮ್ಯಾ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಬಗ್ಗೆ ಅವಹೇಳನಕಾರಿಯಾಗಿ ಟ್ವೀಟ್‌ ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಬುಧವಾರ ಅಂಚೆಯ ಮೂಲಕ ರಮ್ಯಾಗೆ ಗೌರಿ ಹಬ್ಬದ ಬಾಗಿನ ರವಾನಿಸಿ ಪ್ರತಿಭಟನೆ ನಡೆಸಿದರು.

‘ಅಸ್ಸಾಂನಲ್ಲಿ ಮಳೆ ಹಾನಿಯಿಂದ ಜನರು ತತ್ತರಿಸಿದ್ದರೂ ಪ್ರಧಾನಿ ನರೇಂದ್ರ ಮೋದಿ ಅವರು ಅಲ್ಲಿಗೆ ಭೇಟಿ ನೀಡಿ, ಸಾಂತ್ವನ ಹೇಳಲಿಲ್ಲ. ಸಂತ್ರಸ್ತರ ಜತೆ ಮೋದಿ ಇರುವ ಫೋಟೋ ತೋರಿಸಿದರೆ ₹ 25,000 ಬಹುಮಾನ ನೀಡುತ್ತೇನೆ’ ಎಂದು ರಮ್ಯಾ ಅವರು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ. ಪ್ರಧಾನಮಂತ್ರಿಗಳ ಬಗ್ಗೆ ಈ ರೀತಿ ಟ್ವೀಟ್‌ ಮಾಡಿರುವುದು ಅರ್ಥ ಹೀನ. ಹೀಗಾಗಿ ರಮ್ಯಾ ಅವರಿಗೆ ಮಕ್ಕಳ ಆಟಿಕೆ ಸಾಮಾನು, ಒಂದು ಜತೆ ಡ್ರೆಸ್‌ ಅನ್ನು ಪೋಸ್ಟ್‌ ಮೂಲಕ ರವಾನೆ ಮಾಡುವ ಮೂಲಕ ಹಬ್ಬದ ಬಾಗಿನ ನೀಡುತ್ತಿದ್ದೇವೆ ಎಂದು ಬಿಜೆಪಿ ಮುಖಂಡರು ಹೇಳಿದರು.

ಉತ್ತರ ಪ್ರದೇಶದಲ್ಲಿ 30 ಮಕ್ಕಳು ಅಸುನೀಗಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ರಾಜೀನಾಮೆ ನೀಡಬೇಕು ಎಂದೂ ರಮ್ಯಾ ಟ್ವೀಟ್ ಮಾಡಿದ್ದಾರೆ, ರಾಜ್ಯದಲ್ಲಿ ಆರೋಗ್ಯ ಸಚಿವರ ತವರು ಜಿಲ್ಲೆಯಲ್ಲೇ ಕಳೆದ ಏಳು ತಿಂಗಳಲ್ಲಿ 287 ಮಕ್ಕಳು ಅಸುನೀಗಿವೆ. ಹೀಗಿರುವಾಗ ಸಿದ್ದರಾಮಯ್ಯ ಅವರ ರಾಜೀನಾಮೆ ಏಕೆ ಕೇಳಲಿಲ್ಲ ಎಂದು ಪ್ರಶ್ನಿಸಿದರು.

ADVERTISEMENT

‘ಪ್ರಧಾನಮಂತ್ರಿ ರಾಜೀನಾಮೆ ಕೇಳುವ ರಮ್ಯಾ ಅವರಿಗೆ ರಾಜ್ಯದಲ್ಲಿ 2,000ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳುತ್ತಿಲ್ಲ. ಜಿಲ್ಲೆಯ ಬಗ್ಗೆ ಕಾಳಜಿ ಇದ್ದರೆ ಸಾಲು ಸಾಲು ರೈತರ ಆತ್ಮಹತ್ಯೆ ತಡೆಯುವ ಕೆಲಸ ಮಾಡಲಿ ಎಂದು ಸವಾಲು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.