ADVERTISEMENT

ರಾಮಚಂದ್ರ ದೇವ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2013, 14:34 IST
Last Updated 11 ಸೆಪ್ಟೆಂಬರ್ 2013, 14:34 IST

ಬೆಂಗಳೂರು :  ಕನ್ನಡ ಸಾಹಿತ್ಯ ಲೋಕದಲ್ಲಿ  ವೈವಿಧ್ಯಮಯ ಬರವಣಿಗೆಗೆ ಹೆಸರಾಗಿದ್ದ ಲೇಖಕ ಡಾ. ರಾಮಚಂದ್ರ ದೇವ ಅವರು ಬುಧವಾರ ವಿಧಿವಶರಾದರು.

ಅನಾರೋಗ್ಯದ ಕಾರಣದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಬುಧವಾರ ಕೊನೆಯುಸಿರೆಳೆದರು.

ನಾಟಕಕಾರ, ಲೇಖಕ, ವಿಮರ್ಶಕ, ಕತೆಗಾರ, ಅನುವಾದಕರಾಗಿ ದೇವ ಅವರು ಕನ್ನಡ ಸಾಹಿತ್ಯದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು. ಅಷ್ಟೇ ಅಲ್ಲದೆ ಪ್ರಜಾವಾಣಿ ದಿನ ಪತ್ರಿಕೆಯಲ್ಲಿ ಸಹಾಯಕ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದರು.

ಕಲ್ಕಡ್ಕದಲ್ಲಿ ಜನಿಸಿದ ಅವರು ಬಾಳಿಲ, ಪಂಜ ಮತ್ತು ಪುತ್ತೂರುಗಳಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದರು. ಇಂಗ್ಲಿಷ್ ಎಂ. ಎ. ಹಾಗೂ ಶೇಕ್ಸ್‌ಪಿಯರ್ ಅನುವಾದಗಳ ತೌಲನಿಕ ಅಧ್ಯಯನಕ್ಕಾಗಿ ಪಿಎಚ್‌ಡಿ ಪದವಿ ಪಡೆದಿದ್ದರು.

ಇಂಗ್ಲಿಷ್ ಅಧ್ಯಾಪಕರಾಗಿ ವೃತ್ತಿ ಜೀವನ ಪ್ರಾರಂಭಿಸಿದ ಅವರು, ಗ್ರಂಥಪಾಲಕರಾಗಿಯೂ ಸೇವೆ ಸಲ್ಲಿಸಿದ್ದರು.

ಇಂದ್ರಪ್ರಸ್ಥ, ಮಾತಾಡುವ ಮರ (ಕವಿತೆ) ದಂಗೆಯ ಪ್ರಕರಣ, ಮೊಗೇಲ (ಕಥಾ ಸಂಗ್ರಹ) ಮುಚ್ಚು ಮತ್ತು ಇತರ ಲೇಖನಗಳು, ಮಾತುಕತೆ, ಅವರ ಪ್ರಮುಖ ಬರವಣಿಗೆಗಳಾಗಿವೆ

ಅನುವಾದ : ಶೇಕ್ಸ್‌ಪಿಯರ್‌ನ ಹ್ಯಾಮ್ಲೆಟ್, ಮ್ಯಾಕ್‌ಬೆತ್ ನಾಟಕಗಳು ಕನ್ನಡಕ್ಕೆ ಹಾಗೂ ಗೋಪಾಲಕೃಷ್ಣಅಡಿಗರ ಕೆಲವು ಕವಿತೆಗಳು, ವಡ್ಡಾರಾಧನೆಯ ಕೆಲವು ಕತೆಗಳು ಹಾಗೂ ಸಂಸ್ಕೃತ ನಾಟಕ `ಭಗವದಜ್ಜುಕೀಯಂ' ಸೇರಿದಂತೆ ಹಲವು ಬರಹಗಳನ್ನು ಇಂಗ್ಲಿಷಿಗೆ ಅನುವಾದಿಸಿದ್ದರು.

ರಾಮಚಂದ್ರ ದೇವ ಅವರ ಬ್ಲಾಗ್ ಲಿಂಕ್ http://devasaahitya.blogspot.in/

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.