ADVERTISEMENT

ವರುಣನ ಆರ್ಭಟ: ಬೆಳೆ ಹಾನಿ

​ಪ್ರಜಾವಾಣಿ ವಾರ್ತೆ
Published 24 ಮೇ 2017, 19:30 IST
Last Updated 24 ಮೇ 2017, 19:30 IST
ಚಿಕ್ಕಮಗಳೂರಿನ ಚಿಕ್ಕಗೌಜ ಗ್ರಾಮದ ಹೊಲವೊಂದರಲ್ಲಿ ಟೊಮೆಟೊ ಬೆಳೆ ನೆಲಕಚ್ಚಿರುವುದು
ಚಿಕ್ಕಮಗಳೂರಿನ ಚಿಕ್ಕಗೌಜ ಗ್ರಾಮದ ಹೊಲವೊಂದರಲ್ಲಿ ಟೊಮೆಟೊ ಬೆಳೆ ನೆಲಕಚ್ಚಿರುವುದು   
ಚಿಕ್ಕಮಗಳೂರು: ತಾಲ್ಲೂಕಿನಲ್ಲಿ ಮಂಗಳವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ಕೆಲವೆಡೆ ಬೆಳೆ ಹಾಳಾಗಿದ್ದು, ಕೆಲ ಮನೆಗಳ ಚಾವಣಿಯ ಶೀಟುಗಳು, ಹೆಂಚುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. 
 
ಹಿರೇಗೌಜ, ಚಿಕ್ಕಗೌಜ, ಲಕ್ಯಾ ಗ್ರಾಮಗಳಲ್ಲಿ ಬೆಳೆದಿದ್ದ ಟೊಮೆಟೊ, ಹುರುಳಿಕಾಯಿ, ಬಟಾಣಿ ಬೆಳೆಗಳು ನೆಲಕಚ್ಚಿವೆ. ಚಿಕ್ಕಗೌಜದಲ್ಲಿ ಮನೆಯೊಂದರ ಚಾವಣಿ ಕುಸಿದು ಹಾನಿ ಉಂಟಾಗಿದೆ. ಶೀಟುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಮನೆಯೊಳಕ್ಕೆ ನೀರು ನುಗ್ಗಿದೆ.
 
ನರಸಿಂಹರಾಜಪುರ ತಾಲ್ಲೂಕಿನಾದ್ಯಂತ ರಾತ್ರಿ ಸುರಿದ ಮಳೆ ಹಾಗೂ ಗಾಳಿಗೆ ಹಾನಿ ಉಂಟಾಗಿದೆ. ಕಡೂರು ಮತ್ತು ಮೂಡಿಗೆರೆಯಲ್ಲಿ ಕೂಡ ಮಳೆಯಿಂದ ಹಾನಿ ಸಂಭವಿಸಿದೆ.
 
ಮಂಗಳೂರಿನಲ್ಲಿ ರಾತ್ರಿ ಸಿಡಿಲಿನೊಂದಿಗೆ ಭಾರಿ ಮಳೆಯಾಗಿದೆ. ಉಳ್ಳಾಲ, ಬಜ್ಪೆ, ಬೆಳ್ತಂಗಡಿ, ಧರ್ಮಸ್ಥಳ, ಮಡಂತ್ಯಾರು, ಪುಂಜಾಲಕಟ್ಟೆ, ಬಂಟ್ವಾಳ, ಸುಬ್ರಹ್ಮಣ್ಯ, ಮೂಡುಬಿದಿರೆ ಪರಿಸರದಲ್ಲಿ ಒಳ್ಳೆಯ ಮಳೆ ಬಿದ್ದಿದೆ. 
 
ಕಾರ್ಕಳದಲ್ಲಿ ಗಾಳಿ ಸಹಿತ ಸಾಧಾರಣ ಮಳೆಯಾಗಿದ್ದು, ಉಡುಪಿ ತಾಲ್ಲೂಕಿನ ವಿವಿಧೆಡೆ ಹಾಗೂ ಕಾಸರಗೋಡು ಜಿಲ್ಲೆಯ ಕಾಸರಗೋಡು ಮತ್ತು ಮುಳ್ಳೇರಿಯಲ್ಲಿ ಗುಡುಗು ಸಹಿತ ಮಳೆಯಾಗಿದೆ.
 
ಮನೆಗಳಿಗೆ ಹಾನಿ (ಧಾರವಾಡ ವರದಿ): ತಾಲ್ಲೂಕಿನಲ್ಲಿ ಮಂಗಳವಾರ ಸುರಿದ ಭಾರಿ ಮಳೆ ಮತ್ತು ಗಾಳಿಗೆ 42 ಮನೆಗಳು ಜಖಂಗೊಂಡಿವೆ. ಹೊಸಯಲ್ಲಾಪುರ, ಮನಸೂರು, ಮನಗುಂಡಿ, ನುಗ್ಗಿಕೇರಿ, ನಾಯಕನಹೂಲಿಕಟ್ಟಿ, ಬೆಳ್ಳಿಗಟ್ಟಿಯಲ್ಲಿ 10 ಮನೆಗಳಿಗೆ ಹಾನಿಯಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.