ಬಳ್ಳಾರಿ: ನಗರದ ಕನಕದುರ್ಗಮ್ಮ ಗುಡಿಯ ವೃತ್ತದಲ್ಲಿ ಮಾರಾಟ ಮಾಡುತ್ತಿದ್ದ ಪಿಒಪಿ ಗಣಪನ ಮೂರ್ತಿಗಳನ್ನು ವಶಪಡಿಸಿಕೊಳ್ಳುವ ಪಾಲಿಕೆಯ ಕಾರ್ಯಾಚರಣೆಗೆ ಬುಧವಾರ ವರ್ತಕರಿಂದ ತೀವ್ರ ವಿರೋಧ ವ್ಯಕ್ತವಾಯಿತು. ಬೆದರಿಕೆ ಒಡ್ಡಿ, ಕಾರ್ಯಾಚರಣೆಗೆ ಪ್ರತಿರೋಧ ತೋರಿದಾಗ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.
ಮಧ್ಯಾಹ್ನ 2 ಗಂಟೆ ವೇಳೆಗೆ ಪೊಲೀಸರೊಂದಿಗೆ ಸ್ಥಳಕ್ಕೆ ಬಂದ ಪಾಲಿಕೆ ಆಯುಕ್ತ ಎಂ.ಕೆ.ನಲ್ವಡಿ ಅವರ ಜತೆ ವರ್ತಕರು ವಾಗ್ವಾದ ನಡೆಸಿದರು. ಸಿಬ್ಬಂದಿಯನ್ನು ತಡೆದರು. ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದರು. ಅವರ ಮಾತನ್ನು ಪರಿಗಣಿಸದೆ, ಪೊಲೀಸರ ನೆರವಿನೊಂದಿಗೆ ಮೂರ್ತಿಗಳನ್ನು ವಶಕ್ಕೆ ಪಡೆಯಲಾಯಿತು.
ನಗರದ ಹಲವೆಡೆ ಪಿಒಪಿ ಮೂರ್ತಿಗಳನ್ನು ಮಾರಾಟ ಮಾಡುತ್ತಿದ್ದವರಿಗೆ ಪಾಲಿಕೆಯು ನೋಟಿಸ್ ನೀಡಿ, ಆಗಸ್ಟ್ 22ರ ಒಳಗೆ ತೆರವುಗೊಳಿಸುವಂತೆ ಸೂಚಿಸಿತ್ತು. ಮಂಗಳವಾರ ಕೂಡ ಪಾಲಿಕೆಯ ಆರೋಗ್ಯ ವಿಭಾಗದ ಸಿಬ್ಬಂದಿ ಮೂರ್ತಿಗಳನ್ನು ವಶಪಡಿಸಿಕೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.