ಬೆಂಗಳೂರು: ರಾಮಕಥಾ ಗಾಯಕಿ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀಗಳ ವಿರುದ್ಧದ ಮೇಲ್ಮನವಿ ವಿಚಾರಣೆಯಿಂದ ನ್ಯಾಯಮೂರ್ತಿ ರಾಮಮೋಹನ ರೆಡ್ಡಿ ಅವರು ಹಿಂದೆ ಸರಿದಿದ್ದಾರೆ.
ತಮ್ಮ ವಿರುದ್ಧ ದಾಖಲಿಸಲಾಗಿರುವ ಅತ್ಯಾಚಾರ ಪ್ರಕರಣವನ್ನು ರದ್ದು ಮಾಡುವಂತೆ ಕೋರಿ ಶ್ರೀಗಳು ಸಲ್ಲಿಸಿದ್ದ ರಿಟ್ ಅರ್ಜಿ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಡಿ.ಎಚ್.ವಘೇಲಾ, ನ್ಯಾಯಮೂರ್ತಿ ರಾಮಮೋಹನ ರೆಡ್ಡಿ ಅವರಿದ್ದ ವಿಭಾಗೀಯ ಪೀಠವು ಮಂಗಳವಾರ ವಿಚಾರಣೆ ನಡೆಸಿತು.
ಬೆಳಗಿನ ಕಲಾಪದಲ್ಲಿ ಕಕ್ಷಿದಾರ ಶ್ರೀಗಳ ಪರ ವಾದಿಸಿದ ಹಿರಿಯ ವಕೀಲ ಬಿ.ವಿ. ಆಚಾರ್ಯ ಅವರು, ‘ನನ್ನ ಕಕ್ಷಿದಾರರು ಅತ್ಯಾಚಾರ ಎಸಗಿಲ್ಲ. ಇದೆಲ್ಲಾ ಸುಳ್ಳು ಆರೋಪ’ ಎಂದು ಪ್ರತಿಪಾದಿಸಿದರು.
ಈ ವೇಳೆ, ‘ಸಿಐಡಿ ತನಿಖೆ ಯಾವ ಹಂತದಲ್ಲಿದೆ? ಚಾರ್ಜ್ಶೀಟ್ ಸಲ್ಲಿಸಲಾಗಿದೆಯೇ? ಸಾಕ್ಷಿಗಳ ವಿಚಾರಣೆ ನಡೆಸಿದ್ದೀರಾ...’ ಎಂಬ ಮುಖ್ಯ ನ್ಯಾಯಮೂರ್ತಿಗಳ ಪ್ರಶ್ನೆಗೆ, ಪ್ರಾಸಿಕ್ಯೂಷನ್ ಪರ ಹಾಜರಾಗಿದ್ದ ಅಡ್ವೊಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್ ಉತ್ತರಿಸಿ, ‘ಬಾಕಿ ಉಳಿದಿರುವ ವೈದ್ಯಕೀಯ ಪರೀಕ್ಷೆಗೆ ತನಿಖಾಧಿಕಾರಿಗಳ ಜೊತೆ ಸ್ವಾಮೀಜಿ ಸಹಕರಿಸುತ್ತಿಲ್ಲ’ ಎಂದರು.
‘ಈ ಕಾರಣಕ್ಕಾಗಿಯೇ ಸ್ವಾಮೀಜಿಯವರ ನಿರೀಕ್ಷಣಾ ಜಾಮೀನು ರದ್ದುಗೊಳಿಸುವಂತೆ ಕೋರಿ ಮನವಿ ಸಲ್ಲಿಸಲಾಗುವುದು’ ಎಂದೂ ಅವರು ನ್ಯಾಯಪೀಠಕ್ಕೆ ವಿವರಿಸಿದರು.
ವಾದ ಪ್ರತಿವಾದ ಆಲಿಸಿದ ಪೀಠವು, ‘ತನಿಖೆ ಎಲ್ಲ ವಿವರಗಳನ್ನು ಒಪ್ಪಿಸಿ’ ಎಂದು ಸೂಚಿಸಿ ಕಲಾಪವನ್ನು ಮಧ್ಯಾಹಕ್ಕೆ ಮುಂದೂಡಿತು. ಆದರೆ ಮಧ್ಯಾಹ್ನ ಪ್ರಕರಣ ವಿಚಾರಣೆಗೆ ಬರುತ್ತಿದ್ದಂತೆಯೇ ನ್ಯಾಯಮೂರ್ತಿ ರಾಮಮೋಹನ ರೆಡ್ಡಿ ಅವರು ವಿಚಾರಣೆಯಿಂದ ಹಿಂದೆ ಸರಿಯುತ್ತಿರುವುದಾಗಿ ಪ್ರಕಟಿಸಿದರು.
ಈ ಪ್ರಕರಣದ ಸಂಬಂಧ ಏಕಸದಸ್ಯ ಪೀಠದ ನ್ಯಾ. ಕೆ.ಎನ್.ಫಣೀಂದ್ರ ಅವರೂ ವಿಚಾರಣೆಯಿಂದ ಹಿಂದೆ ಸರಿದಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.