ADVERTISEMENT

ಸಂಗಮ–ಸಂಭ್ರಮ ಸಮ್ಮೇಳನಕ್ಕೆ ಚಾಲನೆ

ರಂಗಮಂದಿರಗಳ ದರ ಏಕರೂಪಕ್ಕೆ ತರಲು ಚಿಂತನೆ: ಉಮಾಶ್ರೀ

​ಪ್ರಜಾವಾಣಿ ವಾರ್ತೆ
Published 25 ಜುಲೈ 2015, 20:19 IST
Last Updated 25 ಜುಲೈ 2015, 20:19 IST

ಮಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಾಜ್ಯದ ಎಲ್ಲ ಅಕಾಡೆಮಿಗಳು, ಪ್ರಾಧಿಕಾರ ಮತ್ತು ಅಧ್ಯಯನ ಕೇಂದ್ರಗಳ ಸಹಭಾಗಿತ್ವದಲ್ಲಿ ನಗರದ ಹೊರವಲಯದ ಪಿಲಿಕುಳ ನಿಸರ್ಗಧಾಮದಲ್ಲಿ ‘ಸಂಗಮ– ಸಂಭ್ರಮ 2015’ ಎರಡು ದಿನಗಳ ರಾಜ್ಯ ಸಮ್ಮೇಳನ ಶನಿವಾರ ಆರಂಭಗೊಂಡಿತು.

‘ವರ್ತಮಾನದ ತಲ್ಲಣಗಳು– ಸಾಂಸ್ಕೃತಿಕ ಪ್ರತಿಕ್ರಿಯೆ’ ಧ್ಯೇಯದೊಂದಿಗೆ 13 ಅಕಾಡೆಮಿಗಳು, ಎರಡು ಪ್ರಾಧಿಕಾರ ಒಂದು ಅಧ್ಯಯನ ಕೇಂದ್ರದ ವತಿಯಿಂದ ಆಯೋಜಿಸಲಾಗಿರುವ ಈ ಸಮ್ಮೇಳನಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಅವರು ಚಾಲನೆ ನೀಡಿದರು.

‘ಅಕಾಡೆಮಿಗಳು ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎನ್ನುವ ಉದ್ದೇಶದಿಂದ ಇಂತಹ ಸಮಾವೇಶಗಳನ್ನು ಆಯೋಜಿಸಲಾಗುತ್ತಿದೆ. ನನ್ನ ಅಧಿಕಾರಾವಧಿಯಲ್ಲಿ ಅಕಾಡೆಮಿಗಳಿಗೆ ಉತ್ತಮ ವ್ಯಕ್ತಿಗಳನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದೇನೆ ಎಂಬ ತೃಪ್ತಿ ಇದೆ. ಅಲ್ಲದೆ, ಮಹಿಳೆಯರಿಗೂ ಅವಕಾಶ ಕೊಡುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಲಾಗಿದೆ. ಎಲ್ಲ ಅಕಾಡೆಮಿಯ ಅಧ್ಯಕ್ಷರು– ಸದಸ್ಯರು ಸಹೋದರತೆಯ ಭಾವದಿಂದ ಒಗ್ಗಟ್ಟಾಗಿ ಕೆಲಸ ನಿರ್ವಹಿಸುತ್ತಿರುವುದು ಖುಷಿಯ ವಿಚಾರವಾಗಿದೆ’ ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ತಾಂತ್ರಿಕ ಸ್ಪರ್ಶ ನೀಡುವ ಕೆಲಸ ಭರದಿಂದ ಸಾಗಿದೆ. ಅಲ್ಲದೆ, ಜಿಲ್ಲಾ ಕೇಂದ್ರದಲ್ಲಿರುವ ರಂಗಮಂದಿರಗಳ ದರವನ್ನು ಏಕರೂಪವಾಗಿ ಮಾಡಬೇಕು ಎನ್ನುವ ಚಿಂತನೆ ನಡೆದಿದೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತರ್ಜಾಲದ ಮೂಲಕ ಟಿಕೆಟ್‌ ಕಾಯ್ದಿರಿಸುವ ವ್ಯವಸ್ಥೆ ತರಲಾಗಿದೆ. ಕಲಾಕ್ಷೇತ್ರವನ್ನು ಕಾರ್ಯಕ್ರಮಕ್ಕಾಗಿ ಮೀಸಲಿರಿಸಿ ಅನಿವಾರ್ಯ ಕಾರಣದಿಂದ ಅದನ್ನು ಬಳಕೆ ಮಾಡದೇ ಇದ್ದಲ್ಲಿ, ಜಮಾ ಮಾಡಲಾದ ಹಣವನ್ನು ಮರುಪಾವತಿ ಮಾಡಲಾಗುತ್ತದೆ ಎಂದು ಹೇಳಿದರು.

ಅಕಾಡೆಮಿ, ಪ್ರಾಧಿಕಾರ ಮತ್ತು ಅಧ್ಯಯನ ಕೇಂದ್ರಗಳಿಂದ 25ಕ್ಕೂ ಹೆಚ್ಚು ಕಲಾತಂಡಗಳಿಂದ ಸಾಂಸ್ಕೃತಿಕ ಮೆರವಣಿಗೆ ನಡೆಯಿತು. 13 ಅಕಾಡೆಮಿಗಳ, ಎರಡು ಪ್ರಾಧಿಕಾರಗಳ ಅಧ್ಯಕ್ಷರು, ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಮನ್ವಯಾಧಿಕಾರಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.