ADVERTISEMENT

ಸಾಹಿತ್ಯ ಸಮ್ಮೇಳನಕ್ಕೆ ₹ 2 ಕೋಟಿ ಹೆಚ್ಚುವರಿ ಅನುದಾನ: ಸಚಿವ ಮಹದೇವಪ್ಪ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2017, 19:32 IST
Last Updated 5 ನವೆಂಬರ್ 2017, 19:32 IST
ಸಾಹಿತ್ಯ ಸಮ್ಮೇಳನಕ್ಕೆ ₹ 2 ಕೋಟಿ ಹೆಚ್ಚುವರಿ ಅನುದಾನ: ಸಚಿವ ಮಹದೇವಪ್ಪ
ಸಾಹಿತ್ಯ ಸಮ್ಮೇಳನಕ್ಕೆ ₹ 2 ಕೋಟಿ ಹೆಚ್ಚುವರಿ ಅನುದಾನ: ಸಚಿವ ಮಹದೇವಪ್ಪ   

ಮೈಸೂರು: ನ.24ರಿಂದ 26ರ ವರೆಗೆ ನಡೆಯಲಿರುವ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ರಾಜ್ಯ ಸರ್ಕಾರ ₹ 2 ಕೋಟಿ ಹೆಚ್ಚುವರಿ ಅನುದಾನ ನೀಡಿದೆ. ಇದರಿಂದ ಸಾಹಿತ್ಯ ಜಾತ್ರೆಗೆ ಒಟ್ಟು ₹ 8 ಕೋಟಿ ಲಭ್ಯವಾಗಿದೆ.

₹ 10 ಕೋಟಿ ಅನುದಾನಕ್ಕೆ ಕೋರಿಕೆ ಸಲ್ಲಿಸಲಾಗಿತ್ತು. ಇದರಲ್ಲಿ ₹ 6 ಕೋಟಿಯನ್ನು ಈಗಾಗಲೆ ಬಿಡುಗಡೆ ಮಾಡಲಾಗಿದೆ. ಸಮ್ಮೇಳನಕ್ಕೆ ಹೆಚ್ಚು ಜನ ಬರುವ ನಿರೀಕ್ಷೆ ಇದ್ದು, ವೆಚ್ಚವೂ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ, ಹೆಚ್ಚುವರಿಯಾಗಿ ₹ 2 ಕೋಟಿ ಬಿಡುಗಡೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ತಿಳಿಸಿದರು.

ಅಧಿಕಾರಿಗಳು ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳೊಂದಿಗೆ ಭಾನುವಾರ ಇಲ್ಲಿ ಸಭೆ ನಡೆಸಿದ ಸಚಿವರು, ಸಮ್ಮೇಳನದ ಸಿದ್ಧತೆಯನ್ನು ಪರಿಶೀಲಿಸಿದರು.

ಮೂರು ದಿನಗಳ ಸಮ್ಮೇಳನದಲ್ಲಿ ಒಟ್ಟು 3.62 ಲಕ್ಷ ಜನರಿಗೆ ಊಟ ಮತ್ತು ತಿಂಡಿಯ ವ್ಯವಸ್ಥೆ ಮಾಡಲಾಗಿದೆ. ಮಹಾರಾಜ ಕಾಲೇಜು ಮೈದಾನ, ಸ್ಕೌಟ್ಸ್‌ ಅಂಡ್‌ ಗೈಡ್ ಮೈದಾನ ಹಾಗೂ ಓವೆಲ್‌ ಮೈದಾನದಲ್ಲಿ 200 ಕೌಂಟರುಗಳನ್ನು ತೆರೆಯಲಾಗುತ್ತಿದೆ. ರಾಗಿಮುದ್ದೆ, ಜೋಳದ ರೊಟ್ಟಿ, ಸಿರಿಧಾನ್ಯದ ಪಾಯಸ, ಮೈಸೂರು ಪಾಕ್‌, ಕುಚಲಕ್ಕಿ ಅನ್ನ, ಈರನಗೆರೆ ಬದನೆಕಾಯಿ ಪಲ್ಯ ಹಾಗೂ ಮೇಲುಕೋಟೆ ಪುಳಿಯೊಗರೆ ಸೇರಿ ತರಹೇವಾರಿ ಖಾದ್ಯದ ಪಟ್ಟಿ ಸಿದ್ಧವಾಗಿದೆ.

ADVERTISEMENT

ಸಮ್ಮೇಳನದ ಕುರಿತು ಹೊರನಾಡ ಕನ್ನಡಿಗರ ಗಮನ ಸೆಳೆಯಲು ದೆಹಲಿಯಲ್ಲಿಯೂ ಪ್ರಚಾರ ಕೈಗೊಳ್ಳಲು ಸಭೆ ನಿರ್ಧರಿಸಿತು. ಸಮ್ಮೇಳನ ಅಧ್ಯಕ್ಷರ ಮೆರವಣಿಗೆಯನ್ನು ಜಂಬೂಸವಾರಿ ಮಾದರಿಯಲ್ಲಿ ನಡೆಸುವ ಕುರಿತು ಚರ್ಚಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.