ಶಿವಮೊಗ್ಗ/ ಮಂಗಳೂರು: ರಾಜ್ಯದ ಕರಾವಳಿ ಹಾಗೂ ಉತ್ತರ ಭಾಗದಲ್ಲಿ ವರುಣನ ಆರ್ಭಟ ಮುಂದುವರಿದಿದೆ. ಸಿಡಿಲಿಗೆ ಮಹಿಳೆ ಸೇರಿ ಮೂವರು
ಮೃತಪಟ್ಟಿದ್ದಾರೆ.
ಸಾಗರ ತಾಲ್ಲೂಕಿನ ತಾಳಗುಪ್ಪ ಸಮೀಪದ ಚೂರಿಕಟ್ಟೆಯ ಹೆಡಗೋಡು ಗ್ರಾಮದಲ್ಲಿ ಸೋಮವಾರ ಸಿಡಿಲು ಬಡಿದು ಮನ್ಮನೆ ನಿವಾಸಿ ನೇತ್ರಾವತಿ (38) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗದ್ದೆ ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದಾಗ ಸಿಡಿಲು ಬಡಿದಿದೆ. ಜತೆಗಿದ್ದ ಪತಿ ಸುರೇಶ್ (42) ಅವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಸಾಗರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೊಸನಗರ ತಾಲ್ಲೂಕು ರಿಪ್ಪನ್ಪೇಟೆ ಸಮೀಪದ ಬಿಳಕಿ ಗ್ರಾಮದಲ್ಲಿ ಭಾನುವಾರ ಸಿಡಿಲು ಬಡಿದು ರಾಮಪ್ಪ (55) ಎಂಬುವವರು ಮೃತಪಟ್ಟಿದ್ದಾರೆ. ಸಮೀಪದ ಕೋಟೆ ತಾರಿಗ ಗ್ರಾಮದಲ್ಲಿ ತಿಮ್ಮಪ್ಪ ಎಂಬುವವರಿಗೆ ಸೇರಿದ ಮೂರು ಎತ್ತುಗಳು ಹಾಗೂ ಹುರುಳಿಕೊಪ್ಪ ಗ್ರಾಮದ ರಾಜಪ್ಪ ಎಂಬುವವರಿಗೆ ಸೇರಿದ ಒಂದು ಎತ್ತು ಸಿಡಿಲಿಗೆ ಬಲಿಯಾಗಿವೆ. ಇವುಗಳ ಮೌಲ್ಯ ₹1 ಲಕ್ಷ ಎಂದು ಅಂದಾಜಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸೋಮವಾರ ಸಂಜೆ ಬಿರುಸಿನ ಮಳೆ ಸುರಿದಿದ್ದು, ಪುತ್ತೂರು ತಾಲ್ಲೂಕಿನ ಪುಣ್ಚಪ್ಪಾಡಿ ಗ್ರಾಮದ ಕುಮಾರಮಂಗಲ ಸಮೀಪ ಸಿಡಿಲು ಬಡಿದು ನೆಕ್ಕಿ ನಿವಾಸಿ ಧನಂಜಯ ಮುಗೇರ (35) ಮೃತಪಟ್ಟಿದ್ದಾರೆ.
ಮೃತ ಧನಂಜಯನ ಸಹೋದರಿ ಗೀತಾ (25) ಮತ್ತು ದೊಡ್ಡಪ್ಪ ಕುಂಡಮುಗೇರ (75) ಗಂಭೀರವಾಗಿ ಗಾಯಗೊಂಡಿದ್ದು, ಅವರಿಬ್ಬರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.