ಲಿಂಗಸುಗೂರು (ರಾಯಚೂರು ಜಿಲ್ಲೆ): ನಾರಾಯಣಪುರದ ಬಸವಸಾಗರ ಜಲಾಶಯದಿಂದ ಗುರುವಾರ ಏಕಾಏಕಿ 2.40 ಲಕ್ಷ ಕ್ಯುಸೆಕ್ ನೀರು ಹರಿಸುತ್ತಿರುವುದರಿಂದ ತಾಲ್ಲೂಕಿನ ಶೀಲಹಳ್ಳಿಯ ಕೃಷ್ಣಾ ನದಿ ಸೇತುವೆ ಜಲಾವೃತಗೊಂಡಿದ್ದು, ನಡುಗಡ್ಡೆ ಗ್ರಾಮಗಳ ರಸ್ತೆ ಸಂಪರ್ಕ ಕಡಿತಗೊಂಡಿದೆ.
ನದಿ ಪಾತ್ರದ ನಡುಗಡ್ಡೆ ಗ್ರಾಮಗಳಾದ ಜಲದುರ್ಗ, ಹಂಚಿನಾಳ, ಯಳಗುಂದಿ, ಯರಗೋಡಿ, ಕಡದರಗಡ್ಡಿಗಳು ಸಂಪರ್ಕ ಕಳೆದುಕೊಂಡಿವೆ. ನಡುಗಡ್ಡೆಯಲ್ಲಿರುವ ಮ್ಯಾದರಗಡ್ಡಿ, ಓಂಕಾರದೊಡ್ಡಿ, ಕರಕಲಗಡ್ಡಿ ಸಂತ್ರಸ್ತರು ಪಡಿತರಕ್ಕೂ ಪರದಾಡುತ್ತಿದ್ದಾರೆ. ವಿಷಯ ತಿಳಿದು ಉಪ ವಿಭಾಗಾಧಿಕಾರಿ ದಿವ್ಯಾಪ್ರಭು ನೇತೃತ್ವದ ಅಧಿಕಾರಿಗಳ ತಂಡ ಗುರುವಾರ ಅಲ್ಲಿಗೆ ಭೇಟಿ ನೀಡಿತು. ಮ್ಯಾದರಗಡ್ಡಿ, ಓಂಕಾರದೊಡ್ಡಿ, ಕರಕಲದೊಡ್ಡಿ ಜನ ಅಲ್ಲಿಂದ ಹೊರ ಬರಲು ನಿರಾಕರಿಸಿದ್ದಾರೆ. ಕಳೆದ 12 ವರ್ಷಗಳಿಂದ ತಾಲ್ಲೂಕು ಆಡಳಿತ ಶಾಶ್ವತ ವ್ಯವಸ್ಥೆ ಮಾಡದಿರುವ ಬಗ್ಗೆ ದುರುಗಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಪ ವಿಭಾಗಾಧಿಕಾರಿ ನೇತೃತ್ವದಲ್ಲಿ ತಹಶೀಲ್ದಾರ್ ಶಿವಾನಂದ ಸಾಗರ, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಪುಷ್ಪಾ ಕಮ್ಮಾರ, ಉದ್ಯೋಗ ಖಾತ್ರಿ ಸಹಾಯಕ ನಿರ್ದೇಶಕ ಅಮರೇಶ ಸೇರಿದಂತೆ ಸಹಾಯಕ ಸಿಬ್ಬಂದಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.