ಬೆಂಗಳೂರು: ಮೌಲ್ಯವರ್ಧನೆಯಿಂದಾಗಿ ಚಾಮರಾಜನಗರ ಜಿಲ್ಲೆಯ ಸೋಲಿಗರ ಜೇನು ತುಪ್ಪಕ್ಕೆ ಈಗ ಬಂಪರ್ ಬೆಲೆ ಸಿಗಲಾರಂಭಿಸಿದೆ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕೃಷಿ ವಿಜ್ಞಾನ ಕೇಂದ್ರದ ತಾಂತ್ರಿಕ ಸಹಾಯದಿಂದ ನೆರವಿನಿಂದ ಈಗ ಜೇನನ್ನು ಸ್ಯಾಷೆಗಳಲ್ಲಿ ಮಾರಾಟ ಮಾಡುವ ಕೆಲಸ ಶುರುವಾಗಿದೆ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆದ ‘ಕೃಷಿ ಮೇಳ–2014’ರಲ್ಲಿ ಜೇನು ಸ್ಯಾಷೆಗಳನ್ನು ಪರಿಚಯಿಸಲಾಯಿತು.
10 ಗ್ರಾಂ ಸ್ಯಾಷೆ ಬೆಲೆ ₨ 5. ಮೂರು ದಿನಗಳಲ್ಲಿ ಮಾರಾಟದಿಂದ ₨ 10 ಸಾವಿರ ಆದಾಯ ಬಂದಿದೆ. ಸೋಲಿಗರು ಜೇನು ತೆಗೆಯುವುದರಲ್ಲಿ ಪರಿಣಿತರು. ಅವರು ಬಂದಷ್ಟು ಬೆಲೆಗೆ ಅದನ್ನು ಮಾರಾಟ ಮಾಡುತ್ತಿದ್ದರು. ಹೆಚ್ಚಿನ ತೇವಾಂಶ ಉಳಿದುಕೊಳ್ಳುತ್ತಿದ್ದ ಕಾರಣ ಅದಕ್ಕೆ ಒಳ್ಳೆಯ ಬೆಲೆಯೂ ಸಿಗುತ್ತಿರಲಿಲ್ಲ.
ಇದನ್ನು ಗಮನಿಸಿದ ಕೃಷಿ ವಿವಿಯು ಚಾಮರಾಜನಗರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕಳೆದ ವರ್ಷ ಜೇನಿನ ಸಂಸ್ಕರಣಾ ಘಟಕವನ್ನು ಸ್ಥಾಪನೆ ಮಾಡಿತು. ಇದಕ್ಕೆ ರುಡ್ಸೆಟ್ ನೆರವು ಸಿಕ್ಕಿತು. ತಲಾ 15 ಸದಸ್ಯರಂತೆ ಸೋಲಿಗರ ಗುಂಪುಗಳನ್ನು ರಚಿಸಿತು. ಅವರಿಗೆ ಜೇನು ಸಂಸ್ಕರಣೆ, ಪ್ಯಾಕೇಜಿಂಗ್ ಮತ್ತಿತರ ವಿಷಯಗಳ ಬಗ್ಗೆ ತರಬೇತಿ ನೀಡಿತು.
‘ಸೋಲಿಗರು ಸಾಂಪ್ರದಾಯಿಕವಾಗಿ ಜೇನು ತೆಗೆಯುತ್ತಿದ್ದರು. ಒಂದು ಕೆ.ಜಿ. ಜೇನನ್ನು ₨200ಕ್ಕೆ ಮಾರಾಟ ಮಾಡುತ್ತಿದ್ದರು. ಈಗ ಅವರಿಗೆ ಕೆ.ಜಿ.ಗೆ ₨300 ಸಿಗುತ್ತಿದೆ. ಸಂಸ್ಕರಣಾ ಘಟಕದಲ್ಲಿ ಜೇನಿನ ತೇವಾಂಶ ಪ್ರಮಾಣವನ್ನು ಶೇ 24ಕ್ಕೆ ಇಳಿಸಿ ಪ್ಯಾಕಿಂಗ್ ಮಾಡಲಾಗುತ್ತಿದೆ. ಇದರಿಂದ ಜೇನಿಗೆ ಒಳ್ಳೆಯ ಬೆಲೆ ಸಿಗುತ್ತಿದೆ. ಅಲ್ಲದೆ ಗುಣಮಟ್ಟ ಹೆಚ್ಚಾಗಿದೆ. ಸೋಲಿಗರಿಗೂ ಅನುಕೂಲವಾಗಿದೆ’ ಎಂದು ಕೃಷಿ ವಿಜ್ಞಾನ ಕೇಂದ್ರದ ವಿಷಯ ತಜ್ಞೆ ಚಂದ್ರಕಲಾ ಹೇಳುತ್ತಾರೆ.
ಅರಿಶಿನದ ಮೌಲ್ಯವರ್ಧನೆ: ಚಾಮರಾಜನಗರ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವ ಅರಿಶಿನ ಬೆಳೆಯ ಮೌಲ್ಯವರ್ಧನೆ ಮಾಡುವ ಕಾರ್ಯಕ್ಕೂ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಮುಂದಾಗಿದೆ. ಈಗ ಜಿಲ್ಲೆಯ ಅರಿಶಿನ ಬೆಳೆಗೆ ತಮಿಳುನಾಡು ಪ್ರಮುಖ ಮಾರುಕಟ್ಟೆ. ಮಧ್ಯವರ್ತಿಗಳು ಕಡಿಮೆ ಬೆಲೆಗೆ ರೈತರಿಂದ ಅರಿಶಿನ ಖರೀದಿ ಮಾಡಿ ತಮಿಳುನಾಡಿನ ಈರೋಡು ಮಾರುಕಟ್ಟೆಯಲ್ಲಿ ಮಾರುತ್ತಿದ್ದರು.
ರೈತರಿಗೆ ನ್ಯಾಯಯುತ ಬೆಲೆ ದೊರಕುವಂತೆ ಮಾಡಲು ವಿವಿಯ ಕೃಷಿ ವಿಜ್ಞಾನ ಕೇಂದ್ರದ ನೇತೃತ್ವದಲ್ಲಿ ರೈತರ ಸಂಘ ರಚಿಸಿ ಮೌಲ್ಯವರ್ಧನೆಯ ಕಾರ್ಯ ಆರಂಭವಾಗಿದೆ. ಈಗ ಒಂದು ಸಂಘ ರಚಿಸಲಾಗಿದ್ದು, 25 ರೈತ ಸದಸ್ಯರು ಇದ್ದಾರೆ. ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆಯ ತಾಂತ್ರಿಕ ಸಹಕಾರದ ನೆರವಿನಿಂದ ಅರಿಶಿನವನ್ನು ಒಣಗಿಸಿ ಪುಡಿ ಮಾಡಿ ಪೌಡರ್ ರೂಪದಲ್ಲಿ ಮಾರಾಟ ಮಾಡಲಾಗುತ್ತಿದೆ. ಈಗ ಪ್ರಾಯೋಗಿಕವಾಗಿ ಈ ಕಾರ್ಯ ಮಾಡಲಾಗುತ್ತಿದೆ. ಕೃಷಿ ಮೇಳದಲ್ಲಿ ಪೌಡರ್ಗಳ ಪ್ರದರ್ಶನ ಏರ್ಪಡಿಸಲಾಗಿತ್ತು.
ರೈತರ ಜಮೀನಿನಲ್ಲೇ ₨1 ಕೋಟಿ ವೆಚ್ಚದಲ್ಲಿ ಅರಿಶಿನ ಸಂಸ್ಕರಣಾ ಘಟಕ ಸ್ಥಾಪಿಸಲು ಉದ್ದೇಶಿಸಲಾಗಿದೆ. ಇದಕ್ಕೆ ರೈತರೇ ಪ್ರಸ್ತಾವ ಸಿದ್ಧಪಡಿಸಿದ್ದಾರೆ. ಕೃಷಿ ವಿವಿ ಇದಕ್ಕೆ ಅಂತಿಮ ರೂಪುರೇಷೆ ನೀಡಿ ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಿದೆ. ವಿವಿಯಿಂದ ₨1 ಲಕ್ಷ ಅನುದಾನ ನೀಡಲಾಗಿದ್ದು, ಒಂದು ವರ್ಷದಲ್ಲಿ ಈ ಸಂಸ್ಕರಣಾ ಘಟಕ ಆರಂಭವಾಗಲಿದೆ ಎಂದು ಕೃಷಿ ವಿವಿಯ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.