ಹಾವೇರಿ: 81ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ಹಾವೇರಿ ಪಟ್ಟಣದಲ್ಲೇ ನಡೆಸಲು ಆಗ್ರಹಿಸಿ ಆಗಸ್ಟ್ 4ರಂದು ‘ಹಾವೇರಿ ಬಂದ್’ಗೆ ಕರೆ ನೀಡಲಾಗಿದೆ. ಶಾಸಕ ರುದ್ರಪ್ಪ ಲಮಾಣಿ ಅಧ್ಯಕ್ಷತೆಯಲ್ಲಿ ಬುಧವಾರ ನಗರದ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ನಡೆದ ವಿವಿಧ ಸಂಘ– ಸಂಸ್ಥೆಗಳು, ಸಂಘಟನೆಗಳ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
‘ಎಲ್ಲ ಸಂಘ–ಸಂಸ್ಥೆಗಳು, ಸಾಹಿತಿಗಳ ಒಮ್ಮತದ ನಿರ್ಣಯದಂತೆ ಹಾವೇರಿಯಲ್ಲಿ ಸಮ್ಮೇಳನ ನಡೆಸಲು ಒತ್ತಾಯಿಸಿ ಶಾಂತಿಯುತ ಬಂದ್ ಮಾಡಲಾಗುವುದು. ಅಂದು ಜಿಲ್ಲೆಯ ಆರು ಶಾಸಕರ ಬೆಂಬಲದೊಂದಿಗೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು. ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿಗೆ ನಿಯೋಗ ಕರೆದುಕೊಂಡು ಹೋಗಲಾಗುವುದು’ ಎಂದು ಅವರು ಹೇಳಿದರು.
ಸಭೆಯಲ್ಲಿ ಮಾತನಾಡಿದ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ‘ಜಿಲ್ಲೆಯ ಜನಪ್ರತಿನಿಧಿಗಳು, ಸಾಹಿತಿಗಳ ಬಹುಮತದ ಅಭಿಪ್ರಾಯವನ್ನು ಧಿಕ್ಕರಿಸಿ, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಜಿ.ಬಿ. ಮಾಸಣಗಿ ರಾಣೆಬೆನ್ನೂರಿನಲ್ಲಿ ಸಮ್ಮೇಳನ ನಡೆಸುವುದಾಗಿ ಹಟ ಹಿಡಿದಿರುವುದು ಖಂಡನೀಯ. ‘ಸಮ್ಮೇಳನ ನಡೆದರೆ ಹಾವೇರಿಯಲ್ಲಿ ನಡೆಯಲಿ, ಇಲ್ಲದಿದ್ದರೆ ಜಿಲ್ಲೆ ಬಿಟ್ಟು ಹೋಗಲಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.