ADVERTISEMENT

‘ಬೇನಾಮಿ ಪ್ರಕಾಶಕರು ಕಪ್ಪು ಪಟ್ಟಿಗೆ: ಬಂಜಗೆರೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2015, 19:30 IST
Last Updated 11 ಜುಲೈ 2015, 19:30 IST

ಮಡಿಕೇರಿ: ಲೇಖಕರಿಗೆ ಸಂಭಾವನೆ ನೀಡದ ಹಾಗೂ ಬೇನಾಮಿ ಹೆಸರಿನಲ್ಲಿ ಪುಸ್ತಕ ಪ್ರಕಟಿಸುವ ಪ್ರಕಾಶಕರನ್ನು ಕಪ್ಪು ಪಟ್ಟಿಗೆ ಸೇರಿಸಲು ನಾವು ಸಿದ್ಧರಿದ್ದೇವೆ. ಆದರೆ, ಇದುವರೆಗೆ ಯಾವ ಲೇಖಕರೂ ಪ್ರಕಾಶಕರ ವಿರುದ್ಧ ದೂರು ನೀಡಿಲ್ಲ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಬಂಜಗೆರೆ ಜಯಪ್ರಕಾಶ್‌ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೆಲವು ಪ್ರತಿಷ್ಠಿತ ಪ್ರಕಾಶಕ ಸಂಸ್ಥೆಗಳನ್ನು ಹೊರತುಪಡಿಸಿದರೆ ಇನ್ನುಳಿದ ಬಹಳಷ್ಟು ಸಂಸ್ಥೆಗಳು ಲೇಖಕರಿಗೆ, ಸಾಹಿತಿಗಳಿಗೆ ಸೂಕ್ತ ಸಂಭಾವನೆ ನೀಡುವುದಿಲ್ಲ. ಹಲವು ಪ್ರಕರಣಗಳಲ್ಲಿ ಲೇಖಕರಿಂದಲೇ ಹಣ ಪಡೆದು ಪುಸ್ತಕ ಪ್ರಕಟಿಸಿದ ಉದಾಹರಣೆಗಳು ಸಾಕಷ್ಟಿವೆ ಎಂದು ತಿಳಿಸಿದರು.

ಈ ರೀತಿ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ. ಇದರಿಂದಾಗಿ ಪ್ರಕಾಶಕರು ಬೆಳೆದು ಶ್ರೀಮಂತರಾದರು. ಆದರೆ, ಲೇಖಕರು– ಸಾಹಿತಿಗಳು ಬಡವರಾಗಿಯೇ ಉಳಿದರು. ಇದನ್ನು ತಪ್ಪಿಸುವ ಉದ್ದೇಶದಿಂದ ಪ್ರಕಾಶಕರ ಸಹಕಾರಿ ಸಂಘ ಸ್ಥಾಪಿಸಲು ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ ಎಂದರು.

ಪ್ರತಿ ಜಿಲ್ಲೆಯಲ್ಲಿ ಲೇಖಕರು– ಪ್ರಕಾಶಕರು– ಓದುಗರನ್ನು ಒಳಗೊಂಡ ಸಹಕಾರಿ ಸಂಘವನ್ನು ಸ್ಥಾಪಿಸಲಾಗುವುದು. ಸಂಘವು ಪ್ರಕಟಿಸುವ ಅತ್ಯುತ್ತಮ ಪುಸ್ತಕಗಳನ್ನು ಅಕಾಡೆಮಿಯು ಖರೀದಿಸಲಿದೆ. ಹಣದ ವ್ಯವಹಾರವನ್ನು ಪಾರದರ್ಶಕವಾಗಿ ನಿಭಾಯಿಸಲಾಗುವುದು ಎಂದು ಹೇಳಿದರು.

ಮಠಗಳಲ್ಲಿ ಕಪ್ಪು ಹಣ: ಜನರಿಗೆ ಅನ್ನ, ಶಿಕ್ಷಣ, ಆರೋಗ್ಯವನ್ನು ನೀಡುವ ಕೆಲಸವನ್ನು ಸರ್ಕಾರ ಮಾಡಬೇಕು.  ಧರ್ಮ, ಪೂಜೆ ಪುನಸ್ಕಾರದಂತಹ ಧಾರ್ಮಿಕ ವಿಷಯಗಳನ್ನು ನಿಭಾಯಿಸಲು ಮಠಗಳಿಗೆ ಬಿಡಬೇಕು ಎಂದು  ಒತ್ತಾಯಿಸಿದರು. ರಾಜ್ಯದಲ್ಲಿ ಹಲವು ಮಠಗಳಿವೆ.

ಇವು ರಾಜಕಾರಣಿಗಳ ಕಪ್ಪುಹಣವನ್ನು ಇಟ್ಟುಕೊಳ್ಳುವ ಗೋದಾಮು ಆಗಿವೆ. ಚುನಾವಣೆಗಳು ಬಂದಾಗ ಇದೇ ಹಣವನ್ನು ಮಠಗಳು ಮರಳಿ ನೀಡುತ್ತವೆ. ಈ ರೀತಿಯಾಗಿ ಹೊಂದಾಣಿಕೆಯಾಗದಿದ್ದರೆ ಹೊಸ ಮಠಗಳು ಹಾಗೂ ಹೊಸ ಸ್ವಾಮೀಜಿಯನ್ನು ಸಹ ಹುಟ್ಟು ಹಾಕಲಾಗುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.