ಗುಲ್ಬರ್ಗ: ವಿದ್ಯಾರ್ಥಿನಿಯರ ವಸತಿ ನಿಲಯ, ಆರೋಗ್ಯ ಕೇಂದ್ರಗಳ ನಿರ್ಮಾಣ ಹಾಗೂ ಪರಿಹಾರ ಬೋಧನೆಗೆ ಮಂಜೂರಾದ ಅನುದಾನವನ್ನು ಐದು ಅನುದಾನಿತ ಕಾಲೇಜುಗಳು ದುರ್ಬಳಕೆ ಮಾಡಿರುವುದನ್ನು ವಿಶ್ವವಿದ್ಯಾಲಯಗಳ ಅನುದಾನ ಆಯೋಗ (ಯುಜಿಸಿ) ರಚಿಸಿದ್ದ ಸತ್ಯಶೋಧನಾ ಸಮಿತಿಯು ದೃಢಪಡಿಸಿದೆ.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧೀನಕ್ಕೆ ಒಳಪಟ್ಟ ನಗರದ ಶರಣ ಬಸವೇಶ್ವರ ವಿಜ್ಞಾನ ಕಾಲೇಜು, ಶರಣ ಬಸವೇಶ್ವರ ಕಲಾ ಕಾಲೇಜು, ಶರಣ ಬಸವೇಶ್ವರ ವಾಣಿಜ್ಯ ಕಾಲೇಜು, ಗೋದುತಾಯಿ ದೊಡ್ಡಪ್ಪ ಅಪ್ಪ ಮಹಿಳಾ ಕಲಾ ಮತ್ತು ವಾಣಿಜ್ಯ ಕಾಲೇಜು ಮತ್ತು ಬೀದರ್ ಜಿಲ್ಲೆಯ ಬಸವಕಲ್ಯಾಣದ ಎಸ್ಎಸ್ ಖೂಬಾ ಬಸವೇಶ್ವರ ಕಲಾ ಮತ್ತು ವಿಜ್ಞಾನ ಕಾಲೇಜು, ಯುಜಿಸಿ ಅನುದಾನ ದುರ್ಬಳಕೆಯ ಆರೋಪಕ್ಕೆ ಗುರಿಯಾಗಿವೆ.
‘ಪ್ರಜಾವಾಣಿ’ ಸಹೋದರ ಪತ್ರಿಕೆ ‘ಡೆಕ್ಕನ್ ಹೆರಾಲ್ಡ್’ನಲ್ಲಿ ಪ್ರಕಟಗೊಂಡ ವರದಿ ಆಧರಿಸಿ ತನಿಖೆಗೆ ಆದೇಶಿಸಿದ್ದ ಆಯೋಗವು, ಅಮರಾವತಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಕಮಲ್ ಸಿಂಗ್ ನೇತೃತ್ವದಲ್ಲಿ 4 ತಜ್ಞರ ಸತ್ಯಶೋಧನಾ ಸಮಿತಿ ರಚಿಸಿತ್ತು.
ಎಸ್ಎಸ್ ಖೂಬಾ ಬಸವೇಶ್ವರ ಕಲಾ ಮತ್ತು ವಿಜ್ಞಾನ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಬಿ.ಎಸ್. ಮಾಕಲ್ ಹಾಗೂ ಈ ಹಿಂದೆ ನಗರದ ಶರಣಬಸವೇಶ್ವರ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದ ಶಿವರಾಜ್ ಪಾಟೀಲ್ ಕೂಡಾ ಈ ಕುರಿತು ಯುಜಿಸಿಗೆ ದೂರು ನೀಡಿದ್ದರು.
ಅನುದಾನದ ದುರ್ಬಳಕೆ ಬಗ್ಗೆ ಕಾಲೇಜು ಶಿಕ್ಷಣಾಲಯದ ಗುಲ್ಬರ್ಗದ ಜಂಟಿ ನಿರ್ದೇಶಕರು ಈ ಹಿಂದೆಯೇ ತನಿಖೆ ನಡೆಸಿದ್ದರು. ಆ ವರದಿಯಲ್ಲೂ ಹಣ ದುರ್ಬಳಕೆ ಬಗ್ಗೆ ಉಲ್ಲೇಖಿಸಿದ್ದರು.
ಅನುದಾನ: ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶಗಳ ವಿಶೇಷ ಅನುದಾನ ಯೋಜನೆ ಅಡಿಯಲ್ಲಿ ಐದೂ ಕಾಲೇಜುಗಳಲ್ಲಿ ಪರಿಹಾರ ಬೋಧನೆಗೆ ಒಟ್ಟು ₨23.76 ಲಕ್ಷ ಹಾಗೂ ವಿದ್ಯಾರ್ಥಿನಿಯರ ವಸತಿ ನಿಲಯ ನಿರ್ಮಾಣಕ್ಕಾಗಿ ಗೋದುತಾಯಿ ದೊಡ್ಡಪ್ಪ ಅಪ್ಪ ಮಹಿಳಾ ಕಲಾ ಮತ್ತು ವಾಣಿಜ್ಯ ಕಾಲೇಜಿಗೆ ₨63.75 ಲಕ್ಷ, ಬಸವಕಲ್ಯಾಣದ ಕಾಲೇಜಿಗೆ ₨ 46 ಲಕ್ಷ, ಶರಣಬಸವೇಶ್ವರ ವಿಜ್ಞಾನ ಕಾಲೇಜಿಗೆ ₨33.37 ಲಕ್ಷ ಸೇರಿದಂತೆ ಒಟ್ಟು ₨1.67 ಕೋಟಿ ಅನುದಾನ ಮಂಜೂರಾಗಿತ್ತು. ಈ ಅನುದಾನವು ಶರಣಬಸವೇಶ್ವರ ವಿಜ್ಞಾನ ಕಾಲೇಜು ಮತ್ತು ಶರಣ ಬಸವೇಶ್ವರ ವಾಣಿಜ್ಯ ಕಾಲೇಜಿನಲ್ಲಿ ಆರೋಗ್ಯ ಕೇಂದ್ರದ ನಿರ್ಮಾಣವನ್ನೂ ಒಳಗೊಂಡಿದೆ.
ಸಮಿತಿ ಭೇಟಿ: ಯುಜಿಸಿ ಸತ್ಯಶೋಧನಾ ಸಮಿತಿಯು ಈಚೆಗೆ ಕಾಲೇಜಿಗೆ ಭೇಟಿ ನೀಡಿದ್ದು, ದೂರುದಾರರು, ಪ್ರಾಂಶುಪಾಲರು, ಆಡಳಿತ ಮಂಡಳಿ ಹಾಗೂ ವಿದ್ಯಾರ್ಥಿಗಳ ಸಂದರ್ಶನ ನಡೆಸಿ, ಹೇಳಿಕೆಗಳನ್ನು ದಾಖಲಿಸಿಕೊಂಡಿದೆ. ಕಾಲೇಜಿನ ವಿವಿಧ ಸಮಿತಿಗಳಲ್ಲಿ ಶಿಕ್ಷಕರ ಪಾಲ್ಗೊಳ್ಳುವಿಕೆಯ ಅನುಪಸ್ಥಿತಿಯನ್ನು ಪತ್ತೆ ಹಚ್ಚಿದ ಶೋಧನಾ ಸಮಿತಿಯು, ‘ಯುಜಿಸಿ ನಿಯಮಾವಳಿಯ ಉಲ್ಲಂಘನೆ’ ಎಂದು ದಾಖಲಿಸಿದೆ.
ಇತರ ಸಂಗತಿಗಳು: ವಿದ್ಯಾರ್ಥಿನಿಯರ ವಸತಿ ನಿಲಯದ ನಿವೇಶನದ ದಾಖಲೆ ಪತ್ರವನ್ನು ನೀಡುವಲ್ಲಿ ಶರಣಬಸವೇಶ್ವರ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರು ವಿಫಲರಾಗಿದ್ದಾರೆ. ಬದಲಾಗಿ ವಸತಿ ನಿಲಯವನ್ನು ಅದೇ ಕಾಲೇಜಿನ ಆಡಳಿತ ಮಂಡಳಿಯ ಇನ್ನೊಂದು ಎಂಜಿನಿಯರ್ ಕಾಲೇಜು ವಿದ್ಯಾರ್ಥಿಗಳಿಗೆ ನೀಡಲಾಗಿದೆ.
ಬಸವ ಕಲ್ಯಾಣ ಕಾಲೇಜಿಗೆ ಮಂಜೂರಾಗಿದ್ದ ವಸತಿ ನಿಲಯವನ್ನು ಮತ್ತೊಂದು ಅನುದಾನ ರಹಿತ ಪದವಿ ಪೂರ್ವ ಕಾಲೇಜು ಬಳಸಿಕೊಳ್ಳುತ್ತಿದೆ. ಪರಿಹಾರ ಬೋಧನೆಗೆ ಮಂಜೂರಾದ ₨5.39ಲಕ್ಷ ಅನುದಾನದ ಬಳಕೆಯೇ ಪ್ರಶ್ನಾರ್ಹವಾಗಿದೆ. ನಗರದ ಗೋದುತಾಯಿ ದೊಡ್ಡಪ್ಪ ಅಪ್ಪ ಕಾಲೇಜಿಗೆ ಮಂಜೂರಾದ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ಬೇರೆ ಅನುದಾನ ರಹಿತ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಿಗೂ ಅವಕಾಶ ನೀಡಲಾಗಿದೆ. ಅಲ್ಲದೇ ಪ್ರತಿ ವಿದ್ಯಾರ್ಥಿನಿಯಿಂದ ಮಾಸಿಕ ₨2,500 ಸಂಗ್ರಹಿಸುತ್ತಿರುವುದು ಬೆಳಕಿಗೆ ಬಂದಿದೆ. ಇನ್ನೊಂದೆಡೆ ‘ಆರೋಗ್ಯ ಕೇಂದ್ರ’ಗಳು ವಸತಿ ನಿಲಯದಂತೆ ಕಂಡುಬಂದಿದ್ದು, ವೈದ್ಯಕೀಯ ಉಪಕರಣಗಳ ಕೊರತೆ ಇದೆ ಎಂಬ ಸಂಗತಿಗಳನ್ನು ಸಮಿತಿಯು ತನಿಖೆ ವೇಳೆ ಪತ್ತೆ ಹಚ್ಚಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.