ADVERTISEMENT

ಮಂಗಳೂರು: ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2018, 11:34 IST
Last Updated 3 ಜನವರಿ 2018, 11:34 IST
ದೀಪಕ್
ದೀಪಕ್   

ಮಂಗಳೂರು: ಇಲ್ಲಿನ ‌ಸುರತ್ಕಲ್‌ ಸಮೀಪದ ಕೃಷ್ಣಾಪುರದಲ್ಲಿ ಬುಧವಾರ ಮಧ್ಯಾಹ್ನ ಬೈಕಿನಲ್ಲಿ ಹೋಗುತ್ತಿದ್ದ ಯುವಕನೊಬ್ಬನನ್ನು ಕಾರಿನಲ್ಲಿ ಬೆನ್ನಟ್ಟಿ ಬಂದ ನಾಲ್ವರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.

ಕಾಟಿಪಳ್ಳ ಕೈಕಂಬ ನಿವಾಸಿ ದೀಪಕ್ (32) ಕೊಲೆಯಾದ ಯುವಕ. ಈತ ದೂರಸಂಪರ್ಕ ಕಂಪೆನಿಯೊಂದರ ಸಿಮ್ ವಿತರಕನಾಗಿದ್ದ. ಮಧ್ಯಾಹ್ನ 2 ಗಂಟೆ ಸುಮಾರಿಗೆ ಈತನನ್ನು ಕೊಲೆ‌ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶವವನ್ನು ಎ.ಜೆ. ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಆಸ್ಪತ್ರೆಗೆ ನಗರ ಪೊಲೀಸ್ ಕಮಿಷನರ್ ಟಿ.ಆರ್.ಸುರೇಶ್ ಭೇಟಿ ನೀಡಿದ್ದಾರೆ.

ADVERTISEMENT

ಮೃತ ದೀಪಕ್ ಮೊದಲು ಬಜರಂಗದಳದ ಕಾರ್ಯಕರ್ತನಾಗಿದ್ದ‌. ಈಗ ಬಿಜೆಪಿಯ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ. ಅಲ್ಲಿ ಆತನಿಗೆ ಕೆಲವು ಜವಾಬ್ದಾರಿ ನೀಡಲಾಗಿತ್ತು. ಈತ ಮುಸ್ಲಿಂ ಸಮುದಾಯದ ಮಾಲೀಕರೊಬ್ಬರ ಮೊಬೈಲ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

ಈದ್ ಮಿಲಾದ್ ಸಮಯದಲ್ಲೇ ಕೃಷ್ಣಾಪುರದಲ್ಲಿ ಕೋಲವೂ ಇತ್ತು. ಆಗ ದೀಪಕ್ ನೇತೃತ್ವದ ಹಿಂದೂ ಯುವಕರ ಗುಂಪು ಹಾಗೂ ಮುಸ್ಲಿಂ ಯುವಕರ‌ ಗುಂಪಿನ ನಡುವೆ ಬ್ಯಾನರ್ ಕಟ್ಟುವ ಸ್ಥಳದ ವಿಚಾರದಲ್ಲಿ ಗಲಾಟೆ ನಡೆದಿತ್ತು ಎಂಬ ಮಾಹಿತಿ ಪೊಲೀಸರ ಪ್ರಾಥಮಿಕ ಪರಿಶೀಲನೆ ವೇಳೆ ಲಭ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.