ಇಸ್ಲಾಮಾಬಾದ್ (ಪಿಟಿಐ): ಪೆಶಾವರ ಶಾಲಾ ಹತ್ಯಾಕಾಂಡದಲ್ಲಿ ಭಾಗಿಯಾದ ಉಗ್ರರು ಅಡಗಿಕೊಂಡಿದ್ದಾರೆ ಎನ್ನಲಾದ ಗಡಿ ಪ್ರದೇಶದಲ್ಲಿ ಸೂಕ್ತ ಕಾರ್ಯಾಚರಣೆ ನಡೆಸುವುದಾಗಿ ಆಫ್ಘಾನಿಸ್ತಾನ ಮತ್ತು ಐಎಸ್ಎಎಫ್ ಭರವಸೆ ನೀಡಿವೆ ಎಂದು ಪಾಕಿಸ್ತಾನ ಗುರುವಾರ ಹೇಳಿದೆ.
55 ಗಲ್ಲುಶಿಕ್ಷೆ ಜಾರಿಗೆ ಸಿದ್ಧತೆ ಮರಣದಂಡನೆ ಮೇಲೆ ವಿಧಿಸಲಾಗಿದ್ದ ನಿಷೇಧವನ್ನು ಬುಧವಾರ ತೆಗೆದುಹಾಕಿದ ಬೆನ್ನಲ್ಲೇ 55 ಗಲ್ಲುಶಿಕ್ಷೆ ಪ್ರಕರಣಗಳನ್ನು ಜಾರಿಗೊಳಿಸಲು ಪಾಕ್ ಸಿದ್ಧತೆ ನಡೆಸಿದೆ. ಸೇನಾ ನ್ಯಾಯಾಲಯದಿಂದ ಶಿಕ್ಷಿತರಾದ 11 ಮಂದಿ ಸೇರಿದಂತೆ ದೇಶದಲ್ಲಿ ಗಂಭೀರ ಸರಣಿ ಅಪರಾಧ ಪ್ರಕರಣಗಳು ಹಾಗೂ ಭಯೋತ್ಪಾದನಾ ಚಟುವಟಿಕೆಯ ಪ್ರಕರಣಗಳಲ್ಲಿ ಕನಿಷ್ಠ 522 ಅಪರಾಧಿಗಳಿಗೆ ಗಲ್ಲು ವಿಧಿಸಲಾಗಿದೆ. |
ಪಾಕ್ ಸೇನಾ ಮುಖ್ಯಸ್ಥ ಜನರಲ್ ರಹೀಲ್ ಷರೀಫ್, ಐಎಸ್ಐ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ರಿಜ್ವಾನ್ ಅಖ್ತರ್ ಅವರೊಂದಿಗೆ ಬುಧವಾರ ಆಫ್ಘಾನಿಸ್ತಾನಕ್ಕೆ ದಿಢೀರ್ ಭೇಟಿ ನೀಡಿ ಅಲ್ಲಿನ ಅಧ್ಯಕ್ಷ ಅಶ್ರಫ್ ಘನಿ ಮತ್ತು ಅಂತರರಾಷ್ಟ್ರೀಯ ಭದ್ರತಾ ಸಹಕಾರ ದಳ (ಐಎಸ್ಎಎಫ್) ಕಮಾಂಡರ್ ಜನರಲ್ ಜಾನ್ ಕ್ಯಾಂಪ್ಬೆಲ್ ಜತೆ ಮಾತುಕತೆ ನಡೆಸಿದರು.
‘ನಮ್ಮ ನೆಲದಲ್ಲಿ ಪಾಕ್ ವಿರುದ್ಧ ಚಟುವಟಿಕೆಗಳನ್ನು ನಡೆಸಲು ಬಿಡುವುದಿಲ್ಲ. ಅಂತಹ ಲಕ್ಷಣಗಳು ಕಂಡುಬಂದರೆ, ದಮನ ಮಾಡುವುದಾಗಿ ಆಫ್ಘನ್ ಭರವಸೆ ನೀಡಿದೆ’ ಎಂದು ಸೇನಾ ಹೇಳಿಕೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.