ಬೀಜಿಂಗ್: ‘ದೋಕಲಾ ಪ್ರದೇಶದಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳಲಾಗಿದ್ದು, ಯಾವುದೇ ರೀತಿಯ ಬದಲಾವಣೆಗಳಾಗಿಲ್ಲ’ ಎಂದು ಚೀನಾದಲ್ಲಿನ ಭಾರತದ ರಾಯಭಾರಿ ಗೌತಮ್ ಬಂಬಾವಾಲೆ ಸ್ಪಷ್ಟಪಡಿಸಿದ್ದಾರೆ.
ಚೀನಾ ಸೇನೆ ಈ ಪ್ರದೇಶದಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸಲು ಪ್ರಯತ್ನಿಸುತ್ತಿದೆ ಎನ್ನುವ ವರದಿಗಳಿಗೆ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.
‘ಚೀನಾದ ಕ್ರಮಗಳಿಂದಲೇ ದೋಕಲಾ ಬಿಕ್ಕಟ್ಟು ಸೃಷ್ಟಿಯಾಗಿತ್ತು. ಚೀನಾ ಹೆಚ್ಚಿನ ಸೇನೆಯನ್ನು ನಿಯೋಜಿಸುವ ನಿಟ್ಟಿನಲ್ಲಿ ಬ್ಯಾರಕ್ಗಳನ್ನು ನಿರ್ಮಿಸುತ್ತಿರಬಹುದು. ಆದರೆ, ಇವೆಲ್ಲವೂ ಸೂಕ್ಷ್ಮ ಪ್ರದೇಶದಿಂದ ದೂರದಲ್ಲಿ ನಡೆಯುತ್ತಿವೆ. ಇಂತಹ ಚಟುವಟಿಕೆಗಳನ್ನು ನಡೆಸಲು ಆಕ್ಷೇಪವಿಲ್ಲ. ನಮ್ಮ ದೇಶದ ಒಳಗೆಯೂ ಇಂತಹ ಚಟುವಟಿಕೆಗಳು ನಡೆಯುತ್ತಿವೆ’ ಎಂದು ಅವರು ಸೌಥ್ ಚೀನಾ ಮಾರ್ನಿಂಗ್ ಪೊಸ್ಟ್ಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.
‘ಕಳೆದ 30 ವರ್ಷಗಳಿಂದ ಭಾರತ ಮತ್ತು ಚೀನಾ ಗಡಿಯಲ್ಲಿ ಒಂದೇ ಒಂದು ಗುಂಡು ಸಿಡಿದಿಲ್ಲ. ಇದು ಉಭಯ ದೇಶಗಳು ಶಾಂತಿ ಕಾಪಾಡುತ್ತಿರುವುದಕ್ಕೆ ಉದಾಹರಣೆಯಾಗಿದೆ. ದೋಕಲಾ ಬಿಕ್ಕಟ್ಟಿನ ಸಂದರ್ಭದಲ್ಲೂ ಗುಂಡುಗಳು ಸಿಡಿಯಲಿಲ್ಲ. ಇದು ಉಭಯ ದೇಶಗಳ ಸೌಹಾರ್ದಯುತ ರಾಜತಾಂತ್ರಿಕ ಸಂಬಂಧಕ್ಕೂ ಉದಾಹರಣೆಯಾಗಿದೆ’ ಎಂದು ವಿವರಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.