ವಾಷಿಂಗ್ಟನ್: ಭಾರತದಲ್ಲಿ ಉದ್ಯೋಗ ಸೃಷ್ಟಿಸಲು ಸರ್ಕಾರ ವಿಫಲವಾಗಿದ್ದು, ಇದು ದೇಶವನ್ನು ಅಪಾಯದ ಪರಿಸ್ಥಿತಿಯತ್ತ ದೂಡಲಿದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕಳವಳ ವ್ಯಕ್ತಪಡಿಸಿದ್ದಾರೆ.
ಎರಡು ವಾರಗಳ ಅಮೆರಿಕ ಪ್ರವಾಸದಲ್ಲಿರುವ ಅವರು ಸೆಂಟರ್ ಫಾರ್ ಅಮೆರಿಕನ್ ಪ್ರೋಗ್ರೆಸ್(ಸಿಎಪಿ) ಆಯೋಜಿಸಿದ್ದ ಭಾರತ ಮತ್ತು ದಕ್ಷಿಣ ಏಷ್ಯಾದ ತಜ್ಞರೊಂದಿಗಿನ ಸಭೆಯಲ್ಲಿ ಮಾತನಾಡಿದರು. ಸಿಎಪಿ ಮುಖ್ಯಸ್ಥರಾದ ನೀರಾ ತಂಡನ್, ಭಾರತಕ್ಕೆ ಅಮೆರಿಕ ರಾಜಭಾರಿಯಾಗಿದ್ದ ರಿಚರ್ಡ್ ವರ್ಮಾ ಹಾಗೂ ಹಿಲರಿ ಕ್ಲಿಂಟನ್ ಅವರ ಸಲಹೆಗಾರ ಜಾನ್ ಪೊಡೆಸ್ಟಾ ಸೇರಿ ಅನೇಕರು ಸಭೆಯಲ್ಲಿದ್ದರು.
ಭಾರತ ಸರ್ಕಾರವು ದೇಶದಲ್ಲಿ ಉದ್ಯೋಗ ಸೃಷ್ಟಿಸಲು ವಿಫಲಗೊಂಡಿರುವ ಕುರಿತು ಕಳವಳ ವ್ಯಕ್ತಪಡಿಸಿದ್ದು, ಇದರಿಂದ ದೇಶ ಅಪಾಯದ ಪರಿಸ್ಥಿತಿ ತಲುಪುವ ಸಂಭವವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
‘ದಿ ವಾಷಿಂಗ್ಟನ್ ಪೋಸ್ಟ್’ ಪತ್ರಿಕೆಯ ಸಂಪಾದಕೀಯ ಮಂಡಳಿ ಜತೆಗೆ ಆಫ್ ದಿ ರೆಕಾರ್ಡ್ ಚರ್ಚೆ ನಡೆಸಿದ್ದು, ಜಾಗತಿಕವಾಗಿ ಅದರಲ್ಲೂ ಭಾರತದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆ ಸಂಬಂಧ ಕಳವಳ ವ್ಯಕ್ತಪಡಿಸಿದ್ದಾರೆ.
‘ವಿಷಯವನ್ನು ಮೂಲದಿಂದ ಅರಿತಿರುವ ನಾಯಕರಂತೆ ರಾಹುಲ್ ಕಂಡುಬಂದರು. ವಿಷಯಜ್ಞಾನವೇ ಇಲ್ಲದ ವ್ಯಕ್ತಿಯಲ್ಲ. ಅವರೊಂದಿಗೆ ಚರ್ಚೆಯಲ್ಲಿ ಭಾಗಿಯಾದ ಎಲ್ಲರೂ ಸಕಾರಾತ್ಮಕ ಪ್ರತಿಕ್ರಿಯೆ ನೀಡಿರುವುದಾಗಿ ಪ್ರಜಾಡಳಿತ ತಜ್ಞ ಪುನೀತ್ ಆಹ್ಲುವಾಲಿಯಾ ಅಭಿಪ್ರಾಯ ಪಟ್ಟಿದ್ದಾರೆ.
‘ರಾಹುಲ್ ಗಾಂಧಿ ಅವರ ಯೋಚನೆಯಲ್ಲಿನ ಸ್ಪಷ್ಟತೆ, ತಿಳಿವಳಿಕೆ ಹಾಗೂ ನಿಷ್ಪಕ್ಷಪಾತ ಧೋರಣೆ ಪ್ರಭಾವ ಬೀರುವಂಥದು. ತರ್ಕಬದ್ಧ, ಉತ್ತಮ ರೀತಿಯಲ್ಲಿ ಯೋಚಿಸುತ್ತಾರೆ ಹಾಗೂ ವಿಷಯವನ್ನು ಅರ್ಥೈಸಿಕೊಳ್ಳುವ ಸಾಮರ್ಥ್ಯವಿದೆ. ರಾಹುಲ್ ಅವರ ನಡೆ ಮತ್ತು ಸ್ವಭಾವಕ್ಕೆ ವಿರುದ್ಧವಾಗಿ ಅವರನ್ನು ಬಿಂಬಿಸಲಾಗಿದೆ. ಅವರ ವಿರೋಧಿಗಳು ನಕಾರಾತ್ಮ ಪ್ರಚಾರ ನಡೆಸಿದ್ದಾರೆ ಎಂದು ಸಾಗರೋತ್ತರ ಕಾಂಗ್ರೆಸ್ ಘಟಕದ ಪ್ರಮುಖರಾದ ಸ್ಯಾಮ್ ಪಿಟ್ರೋಡಾ ಆರೋಪಿಸಿದ್ದಾರೆ.
ನ್ಯೂಜೆರ್ಸಿಯ ಪ್ರಿನ್ಸ್ಟನ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಸೆ.20ರಂದು ನ್ಯೂಯಾರ್ಕ್ನಲ್ಲಿ ಭಾಷಣ ಮಾಡಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.