ADVERTISEMENT

ನೇಪಾಳ: ಸಾವಿನ ಸಂಖ್ಯೆ 10 ಸಾವಿರ ದಾಟುವ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2015, 10:32 IST
Last Updated 28 ಏಪ್ರಿಲ್ 2015, 10:32 IST
ನೇಪಾಳ: ಸಾವಿನ ಸಂಖ್ಯೆ 10 ಸಾವಿರ ದಾಟುವ ನಿರೀಕ್ಷೆ
ನೇಪಾಳ: ಸಾವಿನ ಸಂಖ್ಯೆ 10 ಸಾವಿರ ದಾಟುವ ನಿರೀಕ್ಷೆ   

ಕಠ್ಮಂಡು: ನೇಪಾಳದಲ್ಲಿ ಭೂಕಂಪದಿಂದ ಉಂಟಾದ ಸಾವಿನ ಸಂಖ್ಯೆ 10 ಸಾವಿರ ದಾಟಬಹುದು ಎಂದು  ಪ್ರಧಾನಿ ಸುಶೀಲ್‌ ಕೊಯಿರಾಲ ಹೇಳಿದ್ದಾರೆ.

ಮಣ್ಣಿನಡಿಯಲ್ಲಿ ಎಣಿಕೆಯಿಲ್ಲದಷ್ಟು ಜನ ಸಿಲುಕಿಕೊಂಡಿದ್ದಾರೆ. ಹೀಗಾಗಿ ಸಾವು ನೋವು ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದ ಅವರು, ಕೆಲವೆಡೆ ಆಹಾರ, ಔಷಧ ಮತ್ತು ತಾತ್ಕಾಲಿಕ ಆಶ್ರಯಕ್ಕಾಗಿ ನಿರ್ಮಿಸಿಕೊಳ್ಳುವ ಪ್ಲಾಸ್ಟಿಕ್‌ ಟೆಂಟ್‌ಗಳು ಸಿಗದೆ ಜನರು ಪರದಾಡುತ್ತಿದ್ದಾರೆ.  ಅಂತರರಾಷ್ಟ್ರೀಯ ಸಮುದಾಯ ಅವರತ್ತ ನೆರವಿನ ಹಸ್ತ ಚಾಚಬೇಕು. ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆ ಇನ್ನಷ್ಟು ವೇಗವಾಗಿ ನಡೆಯಬೇಕು ಎಂದು ಅವರು ಮನವಿ ಮಾಡಿದ್ದಾರೆ.

ನೇಪಾಳಕ್ಕೀಗ ಭಾರಿ ಸವಾಲಿನ ಮತ್ತು ಕಷ್ಟದ ಸಮಯ. 1934ರಲ್ಲಿ ಸಂಭವಿಸಿದ ಭಯಾನಕ ಭೂಕಂಪಕ್ಕಿಂತಲೂ ಈ ಭಾರಿ ಜೀವ ಹಾನಿ ಹೆಚ್ಚಿದೆ. ಅಂದಿನ ಭೂಕಂಪದಲ್ಲಿ ಸುಮಾರು 8,500 ಮಂದಿ ಮೃತಪಟ್ಟಿದ್ದರು. ಈ ಬಾರಿ ಈ ಸಂಖ್ಯೆ 10 ಸಾವಿರ ದಾಟಬಹುದು ಎಂದ ಅವರು, ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.  ಇದೊಂದು ಮಹಾ ದುರಂತವಾಗಿರುವುದರಿಂದ   ಪರಿಹಾರ ಕಾರ್ಯಾಚರಣೆ  ಸವಾಲಿನದು ಎಂದು ಅವರು ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದರು. 

ನೇಪಾಳದ ಜನತೆಗೆ ತುರ್ತಾಗಿ ಇನ್ನಷ್ಟು ಆಹಾರ ಮತ್ತು ಔಷಧ ಬೇಕಾಗಿದೆ. ಜನರು ಮಳೆಯಲ್ಲಿ ಬಯಲುಗಳಲ್ಲಿ ಆಶ್ರಯ ಪಡೆದಿದ್ದಾರೆ. ಅವರಿಗೆ ಇನ್ನಷ್ಟು ಟೆಂಟ್‌ ಅಗತ್ಯವಿದೆ.  ಸುಮಾರು 7 ಸಾವಿರ ಮಂದಿ ಗಾಯಾಳುಗಳಾಗಿ ಆಸ್ಪತ್ರೆಯಲ್ಲಿದ್ದಾರೆ. ಅವರಿಗೆ ನೆರವು ನೀಡಿ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT